ಬೆಂಗಳೂರು: ಕೊರೊನಾ ಅಬ್ಬರದ ನಡುವೆ ಬೆಂಗಳೂರಲ್ಲಿ ಮತ್ತೆ ಲಾಕ್ಡೌನ್ ಬೇಕಾ ಮತ್ತು ಬೇಡ್ವಾ ಅನ್ನೋದು ಇಂದು ತೀರ್ಮಾನ ಆಗುವ ಸಾಧ್ಯತೆಗಳಿವೆ. ಇತ್ತ ಬೆಂಗಳೂರು ಅಷ್ಟ ವಲಯಗಳ ದಿಕ್ಪಾಲಕ ಸಚಿವರು ಸಿಎಂ ಯಡಿಯೂರಪ್ಪ ಅವರಿಗೆ ವರ್ಕ್ ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ.
ಎಂಟು ವಲಯಗಳ ಉಸ್ತುವಾರಿ ಸಚಿವರು 10 ದಿನಗಳ ವರ್ಕ್ ರಿಪೋರ್ಟ್ ಅನ್ನು ಸಿಎಂ ಯಡಿಯೂರಪ್ಪ ಅವರಿಗೆ ಸಲ್ಲಿಸಿದ್ದಾರೆ. 10 ದಿನಗಳ ವರ್ಕ್ ರಿಪೋರ್ಟಿನಲ್ಲಿ ವಲಯವಾರು ಕೊರೊನಾ ನಿಯಂತ್ರಣ, ನಿರ್ವಹಣೆಗೆ ಕೈಗೊಂಡ ಕ್ರಮಗಳನ್ನು ಉಲ್ಲೇಖಿಸಲಾಗಿದೆ. ಆದರೆ ಅಷ್ಟ ದಿಕ್ಪಾಲಕರ ವರ್ಕ್ ರಿಪೋರ್ಟ್ಗೆ ಸಿಎಂ ಯಡಿಯೂರಪ್ಪ ಅತೃಪ್ತಿ ಆಗಿದ್ದಾರೆ ಎನ್ನಲಾಗಿದೆ.
ಈ 10 ದಿನಗಳಲ್ಲಿ ನಿರೀಕ್ಷೆ ಮಾಡಿರುವ ಮಟ್ಟಕ್ಕೆ ಪ್ರಗತಿ ಸಾಧಿಸಿಲ್ಲ. ಅಲ್ಲದೇ ಕೊರೊನಾ ನಿಯಂತ್ರಣ ವಿಚಾರದಲ್ಲಿ ವಲಯವಾರು ಸಾಧನೆ ಆಗಿಲ್ಲ ಎಂದು ಸಿಎಂ ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕೆಲವು ಉಸ್ತುವಾರಿ ಸಚಿವರು ಫೀಲ್ಡ್ಗೆ ಇಳಿಯದೇ ಅಧಿಕಾರಿಗಳಿಂದಲೇ ಮಾಹಿತಿ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ ಎಂದು ಸಿಎಂ ಸಚಿವರಿಗೆ ವಾರ್ನಿಂಗ್ ಕೂಡ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಅಷ್ಟ ದಿಕ್ಪಾಲಕ ಸಚಿವರು
1. ಪಶ್ವಿಮ ವಲಯ – ಡಿಸಿಎಂ ಡಾ.ಅಶ್ವಥ್ ನಾರಾಯಣ್
2. ಪೂರ್ವ ವಲಯ – ಸಚಿವ ವಿ.ಸೋಮಣ್ಣ
3. ದಕ್ಷಿಣ ವಲಯ – ಸಚಿವ ಆರ್.ಅಶೋಕ್
4. ಬೊಮ್ಮನಹಳ್ಳಿ ವಲಯ – ಸಚಿವ ಸುರೇಶ್ ಕುಮಾರ್
5. ಮಹದೇವಪುರ ವಲಯ – ಸಚಿವ ಬೈರತಿ ಬಸವರಾಜು
6. ಯಲಹಂಕ ವಲಯ – ಎಸ್.ಆರ್.ವಿಶ್ವನಾಥ್
7. ಆರ್ ಆರ್ ನಗರವಲಯ – ಸಚಿವ ಎಸ್.ಟಿ.ಸೋಮಶೇಖರ್
8. ದಾಸರಹಳ್ಳಿ ವಲಯ – ಸಚಿವ ಗೋಪಾಲಯ್ಯ
8 ಉಸ್ತುವಾರಿಗಳ ಮೇಲೆ ಸಿಎಂ ಬೇಸರ?
– ದಕ್ಷಿಣ, ಪೂರ್ವ ಮತ್ತು ಪಶ್ಚಿಮ, ಬೊಮ್ಮನಹಳ್ಳಿ ವಲಯದಲ್ಲಿ ಕೊರೊನಾ ನಿಯಂತ್ರಣಾ ಕ್ರಮಗಳು ಸಮಾಧಾನ ತಂದಿಲ್ಲ.
– ಈ ವಲಯಗಳಲ್ಲಿ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗೆ ನಿರಾಕರಿಸುತ್ತಿವೆ
– ಸರ್ಕಾರಿ ಆಸ್ಪತ್ರೆಗಳು, ಕೋವಿಡ್ ಕೇರ್ ಸೆಂಟರ್ ಗಳಲ್ಲಿ ರೋಗಿಗಳಿಗೆ ಮೂಲಸೌಕರ್ಯಗಳ ಕೊರತೆ ನೀಗಿಲ್ಲ
– ಸೋಂಕಿತರನ್ನು ಆಸ್ಪತ್ರೆಗೆ, ಕೋವಿಡ್ ಕೇರ್ ಸೆಂಟರ್ ಗಳಿಗೆ ದಾಖಲಿಸುವ ಪ್ರಕ್ರಿಯೆಯಲ್ಲಿ ವೇಗ ಬಂದಿಲ್ಲ
– ಸೋಂಕಿತರು ಕರೆ ಮಾಡಿದ 2 ಗಂಟೆಯೊಳಗೆ ಅಂಬುಲೆನ್ಸ್ಗಳು ತಲುಪುತ್ತಿಲ್ಲ
– ಕಂಟೈನ್ಮೆಂಟ್ ವಲಯಗಳಲ್ಲಿ ಕೋವಿಡ್ ಟೆಸ್ಟಿಂಗ್ ಪ್ರಮಾಣ ಹೆಚ್ಚಳವಾಗಿಲ್ಲ
– ಪ್ರತಿ ವಲಯಗಳಲ್ಲೂ ಸಹಾಯವಾಣಿಗಳಿದ್ದರೂ ಸಕಾಲಕ್ಕೆ ಸ್ಪಂದನೆ ದೊರಕುತ್ತಿಲ್ಲ ಎಂಬ ಆರೋಪ ಜಾಸ್ತಿ ಇದೆ
– ವಲಯವಾರು ವೈದ್ಯ ಸಿಬ್ಬಂದಿ ಕೊರತೆ ಇದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಕ್ರಮ ಆಗಿಲ್ಲ. ಸ್ವಯಂ ಸೇವಕರ ನೇಮಕ ಹೇಳಿಕೊಳ್ಳುವಂತಿಲ್ಲ
ಸಿಎಂ ಯಡಿಯೂರಪ್ಪ ಈ ಮೂಲಕ ಸಚಿವರ 10 ದಿನಗಳ ವರ್ಕ್ ರಿಪೋರ್ಟ್ನಲ್ಲಿ ವೈಫಲ್ಯಗಳನ್ನು ಎತ್ತಿ ತೋರಿಸಿದ್ದಾರೆ.