ಕಾರವಾರ: ಸಮುದ್ರ ದಂಡೆಯ ಮೇಲೆ ಸೆಲ್ಫೀ ತೆಗೆದುಕೊಳ್ಳಲು ಹೋದ ಯುವಕನೊಬ್ಬ ನೀರಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿರುವ ಘಟನೆ ಕಾರವಾರ ತಾಲೂಕಿನ ಅಂಕೋಲಾದ ಹನಿ ಬೀಚ್ನಲ್ಲಿ ನಡೆದಿದೆ.
ಗುರುದರ್ಶನ್ ಶೇಠ್ ಸಮುದ್ರದಲ್ಲಿ ಕೊಚ್ಚಿ ಹೋದ ವಿದ್ಯಾರ್ಥಿ. ಸ್ಥಳದಲ್ಲಿದ್ದ ಗುರುದರ್ಶನ್ ಗೆಳೆಯರು ಈತನನ್ನು ರಕ್ಷಿಸಲು ಸಮುದ್ರಕ್ಕೆ ಇಳಿದು ತಾವೂ ಕೂಡ ಪ್ರಾಣಾಪಾಯದಲ್ಲಿ ಸಿಲುಕಿಕೊಂಡಿದ್ದರು. ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ರಾಹುಲ್ ಶೇಟ್, ಅಕ್ಷಯ ಬಾಳೇರಿ, ಹಾಗೂ ಪ್ರಶಾಂತ್ ಗಾವಡಿ ಎಂಬ ಮೂವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಈ ನಾಲ್ವರು ಯುವಕರು ಕುಮಟಾದ ಬಾಳಿಗಾ ಕಾಲೇಜಿನ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳೆಂದು ತಿಳಿದುಬಂದಿದೆ. ಭಾನುವಾರ ಸಂಜೆ ನಾಲ್ವರು ಅಂಕೋಲದ ಬಾಳೇಬೈಲಿನ ಹನಿಬೀಚ್ ಗೆ ವಿಹಾರಕ್ಕೆ ತೆರಳಿದ್ರು. ಈ ವೇಳೆ ಘಟನೆ ಸಂಭವಿಸಿದ್ದು, ಗುರುದರ್ಶನ್ ಸಾವನ್ನಪ್ಪಿದ್ದಾನೆ. ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.