ಚಿಕ್ಕಬಳ್ಳಾಪುರ: ರೈಲಿಗೆ ಸಿಲುಕಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.
ಶಾಂತಿ ನಗರದ 20 ವರ್ಷದ ಮದನ್ ಆತ್ಮಹತ್ಯೆ ಮಾಡಿಕೊಂಡ ಯುವಕ. ರೈಲ್ವೆ ಹಳಿಗಳ ಮೇಲೆ ಇಂದು ಬೆಳಿಗ್ಗೆ ಮದನ್ ಶವ ಪತ್ತೆಯಾಗಿದೆ. ಮದನ್ ಯುವತಿಯೊರ್ವಳನ್ನ ಪ್ರೀತಿಸುತ್ತಿದ್ದು, ಈ ಹಿಂದೆ ಇಬ್ಬರೂ ಮನೆ ಬಿಟ್ಟು ನಾಪತ್ತೆಯಾಗಿದ್ದರು. ಆದ್ರೆ ಯುವತಿ ಕಡೆಯವರು ಪೊಲೀಸ್ ಠಾಣೆಗೆ ದೂರು ನೀಡಿದ ಕಾರಣ ಮದನ್ ನಿಂದ ಯುವತಿ ದೂರವಾಗಿ ಮತ್ತೆ ಮನೆ ಸೇರಿದ್ದಾಳೆ ಎನ್ನಲಾಗಿದೆ.
ಇದ್ರಿಂದ ಸಾಕಷ್ಟು ಮನನೊಂದಿದ್ದ ಮದನ್, ನನಗೆ ಒಂದು ವಾರದ ಒಳಗಾಗಿ ಅದೇ ಹುಡುಗಿ ಜೊತೆ ಮದುವೆ ಮಾಡಿ. ಇಲ್ಲವಾದರೆ ಬೇರೆ ಕಡೆ ನೋಡಿಯಾದರೂ ಮದುವೆ ಮಾಡಿ ಅಂತ ಒತ್ತಾಯಿಸಿದ್ದ ಎಂದು ಹೇಳಲಾಗಿದೆ.
ಆದ್ರೆ ಮಂಗಳವಾರ ಸಂಜೆ ಮನೆಯಿಂದ ನಾಪತ್ತೆಯಾದ ಮದನ್, ಇಂದು ರೈಲ್ವೆ ಹಳಿಗಳ ಮೇಲೆ ಶವವಾಗಿ ಪತ್ತೆಯಾಗಿದ್ದಾನೆ. ಆದ್ರೆ ಮದನ್ ತಂದೆ ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿಲ್ಲ, ಬದಲಾಗಿ ಯುವತಿ ಕಡೆಯವರು ಹೊಡೆದು ಕೊಲೆ ಮಾಡಿ ರೈಲ್ವೆ ಹಳಿಗಳ ಮೇಲೆ ಹಾಕಿದ್ದಾರೆ ಅಂತ ದೂರಿದ್ದಾರೆ.
ಈ ಸಂಬಂಧ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.