ಮೈಸೂರು: ಮದುವೆಗೆ ನಿರಾಕರಿಸಿದ ಯುವತಿಗೆ ಯುವಕ ಕಿರುಕುಳ ನೀಡುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ತನ್ನ ಮಗನನ್ನು ಮದುವೆ ಆಗಲು ನಿರಾಕರಿಸಿದ ಯುವತಿ ಮನೆಗೆ ಯುವಕನ ಇಡೀ ಕುಟುಂಬ ನುಗ್ಗಿ ದಾಂಧಲೆ ನಡೆಸಿದ್ದಾರೆ.
ಮೈಸೂರು ಜಿಲ್ಲೆಯ ಬನ್ನೂರಿನ ತುರಗನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮದುವೆ ನಿರಾಕರಿಸಿದ ಹಿನ್ನಲೆಯಲ್ಲಿ ಯುವಕ ಹಾಗೂ ಯುವಕನ ಹೆತ್ತವರು ಯುವತಿಯ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಆಕೆಯ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ.
ತುರಗನೂರು ಗ್ರಾಮದ ಮಲ್ಲಿಕಾರ್ಜುನ, ಅದೇ ಗ್ರಾಮದ ಸುಕನ್ಯಾ(18)ಎಂಬ ಯುವತಿಯನ್ನು ಮದುವೆಯಾಗಲು ಇಚ್ಛಿಸಿದ್ದ. ಸುಕನ್ಯಾಳನ್ನು ತನಗೇ ಕೊಟ್ಟು ಮದುವೆ ಮಾಡುವಂತೆ ಸುಕನ್ಯಾ ಕುಟುಂಬವನ್ನು ಒತ್ತಾಯಿಸುತ್ತಿದ್ದ. ಇದಕ್ಕೆ ಒಪ್ಪದ ಸುಕನ್ಯಾ ಹೆತ್ತವರು ಮಗಳಿಗೆ ಬೇರೆ ಕಡೆ ವರನ ಹುಡುಕಾಟ ನಡೆಸಿದ್ದರು.
ಈ ಮಾಹಿತಿ ಅರಿತ ಮಲ್ಲಿಕಾರ್ಜುನ ಸೋಮವಾರ ತನ್ನ ತಂದೆ ಸಿದ್ದಯ್ಯ, ತಾಯಿ ಮಹದೇವಮ್ಮ ಹಾಗೂ ತನ್ನ ಅಕ್ಕಂದಿರಾದ ಭಾರತಿ, ಸುಮಿತ್ರ ಹಾಗು ಭಾವಂದಿರಾದ ಸಿದ್ಧರಾಜು ಮತ್ತು ಕುಮಾರ್ ಜೊತೆ ಸೇರಿ ಸುಕನ್ಯಾ ಮನೆಗೆ ನುಗ್ಗಿ ಹಿಗ್ಗಾಮುಗ್ಗ ಥಳಿಸಿ ಮನೆಯಲ್ಲಿ ದಾಂಧಲೆ ಮಾಡಿದ್ದಾರೆ.
ಹಲ್ಲೆಯಿಂದ ಗಾಯಗೊಂಡ ಸುಕನ್ಯಾಳಿಗೆ ಬನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.