ಚಿಕ್ಕಬಳ್ಳಾಪುರ: ಮಾಜಿ ಸಿಎಂ ಯಡಿಯೂರಪ್ಪಗೆ ವಯಸ್ಸಾಗಿದೆ, ಹೀಗಾಗಿ ಅವರು ಏನೇನೋ ಮಾತಾಡುತ್ತಾರೆ ಎಂದು ಚಿಕ್ಕಬಳ್ಳಾಪುರದಲ್ಲಿ ಗೃಹಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಮಹದಾಯಿ ವಿಚಾರದಲ್ಲಿ ನೀರು ಬಿಡದಂತೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಒತ್ತಡ ಇದೆ ಎನ್ನುವ ಯಡಿಯೂರಪ್ಪನವರ ಆರೋಪ ಸಂಬಂಧ ಪ್ರತಿಕ್ರಿಯಿಸಿದ ಅವರು ಯಡಿಯೂರಪ್ಪನವರಿಗೆ ವಯಸ್ಸಾಗಿದೆ. ಹೀಗಾಗಿ ಏನೇನೋ ಮಾತಾಡ್ತಾರೆ. ಅವರ ಆರೋಪದಲ್ಲಿ ಯಾವುದೇ ಹುರಳಿಲ್ಲ ಎಂದು ತಿಳಿಸಿದರು.
ಇದೇ ವೇಳೆ ಮಹದಾಯಿ ವಿಚಾರದಲ್ಲಿ ಬಿಜೆಪಿಯವರು ನಾಟಕ ಮಾಡುತ್ತಿದ್ದು, ಅವರದ್ದು ಡ್ರಾಮಾ ಟ್ರೂಪ್ ಇದ್ದಂತೆ. ರಾಜ್ಯದ ನಾಯಕರು ಕೇವಲ ಪಾತ್ರಧಾರಿಗಳು. ಡ್ರಾಮಾ ಟ್ರೂಪ್ ನ ಹೆಡ್ ದೆಹಲಿಯಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.
ಮಹದಾಯಿ ವಿಚಾರದಲ್ಲಿ ಸದ್ಯ ಗೋವಾ ಸಿಎಂ ಪರಿಕ್ಕರ್ ಗೆ ಸಿದ್ದರಾಮಯ್ಯ ಪತ್ರ ಬರೆದರೆ ಪ್ರತ್ಯುತ್ತರ ಇಲ್ಲ. ಆದರೆ ಯಡಿಯೂರಪ್ಪ ಪತ್ರ ಬರೆದ ಮಾರನೇ ದಿನವೇ ಪತ್ರ ಬರುತ್ತೆ. ಇದೆಲ್ಲಾ ಅಮಿತ್ ಶಾ ಹಾಗೂ ರಾಜ್ಯದ ಬಿಜೆಪಿ ನಾಯಕರು ನಡೆಸಿರೋ ಚುನಾವಣಾ ಗಿಮಿಕ್ ಎಂದು ವಾಗ್ದಾಳಿ ನಡೆಸಿದರು.