ಚಾಮರಾಜನಗರ: ದಲಿತ ಮಹಿಳೆ (Dalit Woman) ನೀರು (Water) ಕುಡಿದ ಟ್ಯಾಂಕ್ನಲ್ಲಿದ್ದ (ತೊಂಬೆ) ನೀರು ಖಾಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಅಲ್ಲದೇ ಗ್ರಾಮದ ತೊಂಬೆಗಳಲ್ಲಿ ದಲಿತ ಯುವಕರಿಗೆ ನೀರು ಕುಡಿಸಿದ್ರು. ನಂತರ ಗ್ರಾಮದ ಎಲ್ಲಾ ಕೋಮಿನ ಮುಖಂಡರ ಜೊತೆ ಮಾತುಕತೆ ನಡೆಸಿ ಎಲ್ಲರೂ ಒಟ್ಟಾಗಿ ಸಹಬಾಳ್ವೆ ನಡೆಸಿ ಎಂದು ತಿಳಿ ಹೇಳಿದ್ದಾರೆ.
ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ದಲಿತ ಮಹಿಳೆಯೊಬ್ಬರು ಕಿರು ನೀರು ಸರಬರಾಜು ಟ್ಯಾಂಕ್ನಲ್ಲಿ ನೀರು ಕುಡಿದರೆಂಬ ಕಾರಣಕ್ಕೆ ಟ್ಯಾಂಕ್ನಲ್ಲಿದ್ದ ನೀರನ್ನು ಖಾಲಿ ಮಾಡಿ ಗೋಮೂತ್ರ ಹಾಕಿ ಶುದ್ದಿಕರಿಸಲಾಗಿತ್ತು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ತಾಲೂಕು ಆಡಳಿತದ ಅಧಿಕಾರಿಗಳು ಗ್ರಾಮಕ್ಕೆ ದೌಡಾಯಿಸಿದ್ದಾರೆ. ಘಟನೆ ನಡೆದ ಹೆಗ್ಗೋಠಾರ ಗ್ರಾಮಕ್ಕೆ ಚಾಮರಾಜನಗರ ತಾಲೂಕು ತಹಶೀಲ್ದಾರ್ ಬಸವರಾಜು ಸೇರಿದಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಅಲ್ಲದೇ ಗ್ರಾಮದ ಎಲ್ಲಾ ಕೋಮಿನ ಮುಖಂಡರ ಸಭೆ ನಡೆಸಿ ಮಾಹಿತಿ ಪಡೆದರು. ಈ ವೇಳೆ ಮೇಲ್ವರ್ಗದ ವ್ಯಕ್ತಿಯೊಬ್ಬನಿಂದ ಕೃತ್ಯ ನಡೆದಿದೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದ್ದು ಪೊಲೀಸರ (Police) ತನಿಖೆ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ದಲಿತ ಮಹಿಳೆ ನೀರು ಕುಡಿದರೆಂದು ಟ್ಯಾಂಕ್ ಖಾಲಿ ಮಾಡಿ ಗೋಮೂತ್ರದಿಂದ ಶುದ್ಧಿ!
ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ತಹಶೀಲ್ದಾರ್ ನೀರಿನ ಟ್ಯಾಂಕ್ ಎಲ್ಲಾ ಸಾರ್ವಜನಿಕರ ಉಪಯೋಗಕ್ಕಾಗಿ ಇರುವುದು ಬದಲಿಗೆ ನಿರ್ದಿಷ್ಟ ವರ್ಗದವರಿಗೆ ಅಂತಾ ನೀರಿನ ಟ್ಯಾಂಕ್ ಇಲ್ಲ ಎಂದು ಎಚ್ಚರಿಕೆ ನೀಡಿದ್ರು. ಅಲ್ಲದೇ ಗ್ರಾಮದ ದಲಿತ ಯುವಕರಿಗೆ ಗ್ರಾಮದಲ್ಲಿರುವ ಎಲ್ಲಾ ನೀರಿನ ಟ್ಯಾಂಕ್ಗಳಲ್ಲಿಯೂ ನೀರು ಕುಡಿಸಿ ನೀರಿನ ಟ್ಯಾಂಕ್ ಮೇಲೆ ಇದು ಸಾರ್ವಜನಿಕರ ಉಪಯೋಗಕ್ಕಾಗಿ ಎಲ್ಲಾ ವರ್ಗದ ಜನರು ಉಪಯೋಗಿಸಬಹುದು ಎಂದು ಬರೆಸಿದ್ದಾರೆ. ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ದೂರು ನೀಡಿ ನಾವು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳು ಹೇಳಿದರು. ಒಬ್ಬ ವ್ಯಕ್ತಿ ಈ ರೀತಿಯ ವರ್ತನೆ ಮಾಡಿರೋದು ಸತ್ಯ. ಅವನ ವಿರುದ್ಧ ಕ್ರಮಕ್ಕೆ ದಲಿತ ಮುಖಂಡರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮದುವೆ ವೇದಿಕೆಯಲ್ಲೇ ಅಭ್ಯರ್ಥಿಗಳ ಘೋಷಣೆ – ಡಿಕೆಶಿಗೆ ಸೆಡ್ಡು ಹೊಡೆದ ಸಿದ್ದರಾಮಯ್ಯ