ನವದೆಹಲಿ: ಉತ್ತರ ಪ್ರದೇಶ ಎಂದ ಕೂಡಲೇ ತಕ್ಷಣ ನೆನಪಾಗೋದು ಭಾರತದ ಅತಿದೊಡ್ಡ ರಾಜ್ಯ, ಅಷ್ಟೇ ಅಲ್ಲ ರಾಷ್ಟ್ರ ರಾಜಕಾರಣ ವನ್ನ ನಿರ್ಧರಿಸುವ ಸಮರ ಭೂಮಿ. ಇಲ್ಲಿ ಗೆದ್ದವರು ದೇಶವನ್ನೇ ಆಳ್ತಾರೆ ಅನ್ನೂ ಅಲಿಖಿತ ನಿಯಮ. ಜೊತೆಗೆ ದೇಶದ ಅತಿ ಹೆಚ್ಚು ಮತದಾರರು ಇರುವ ರಾಜ್ಯ ಅನ್ನೂ ಹೆಗ್ಗಳಿಕೆ ಉತ್ತರ ಪ್ರದೇಶದು. ಈ ಕಾರಣಕ್ಕೆ ಉತ್ತರ ಪ್ರದೇಶ ರಾಜಕೀಯ ವಿಚಾರದಲ್ಲಿ ರಾಷ್ಟ್ರದಲ್ಲಿ ಹೆಚ್ಚು ಸುದ್ದಿಯಾಗುತ್ತೆ.
ಇಂತಹ ರಾಜಕೀಯ ರಾಜ್ಯದಲ್ಲಿ ಕಳೆದ ಒಂದು ತಿಂಗಳಿನಿಂದ ಚುನಾವಣಾ ಕಾವು ಜೋರಾಗಿದೆ. ಏಳು ಹಂತದಲ್ಲಿ ನಡೆಯುವ ಚುನಾವಣೆಗೆ ಮುನ್ನುಡಿ ಎನ್ನುವುಂತೆ ಶನಿವಾರ ಮೊದಲ ಹಂತದ ಚುನಾವಣೆಗೆ ಮತದಾನ ನಡೆಯಲಿದೆ.
ಮೊದಲ ಹಂತದಲ್ಲಿ 15 ಜಿಲ್ಲೆಗಳ ಪೈಕಿ 73 ವಿಧಾನ ಸಭೆ ಕ್ಷೇತ್ರಗಳಿಗೆ ಚುನಾವಣೆ ಕಸರತ್ತು ನಡೆಯಲಿದೆ. ಶಾಮಲಿ, ಮಥುರಾ, ಮುಝಪ್ಫರ್ ನಗರ ಬಾಗ್ಫತ್, ಅಲಿಗಡ್ ಸೇರಿದಂತೆ ಹಲವು ಮತ ಕ್ಷೇತ್ರಗಳು ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸುನ ಕ್ಷೇತ್ರಗಳಳಾಗಿದ್ದು ಇದೇ 15 ರಂದು 11 ಜಿಲ್ಲೆಗಳ ಪೈಕಿ 67 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು ಎರಡು ಹಂತದಲ್ಲಿ ಉತ್ತರ ಪ್ರದೇಶದ ಪಶ್ಚಿಮ ಭಾಗದ ಚುನಾವಣೆ ಮಾಡಿ ಮುಗಿಸಲು ಆಯೋಗ ನಿರ್ಧರಿಸಿದೆ.
ಜಾತಿ ಲೆಕ್ಕಾಚಾರ: ಉತ್ತರ ಪ್ರದೇಶದ ರಾಜಕಾರಣ ನಿಂತಿರುವುದು ಜಾತಿ ಲೆಕ್ಕಾಚಾರದಲ್ಲಿ ಹಾಗಾಗೀ ಯಾದವ, ಜಾಟ್, ಮುಸ್ಲಿಂ, ದಲಿತರು ನಿರ್ಣಾಯಕ ಪಾತ್ರ ವನ್ನು ವಹಿಸ್ತಾರೆ. ಹಾಗಾಗೀ ಈ ಬಾರಿಯ ಮತದಾರರು ಎಷ್ಟಿದ್ದಾರೆ? ಜೊತೆಗೆ ಜಾತಿ ಲೆಕ್ಕಾಚಾರ ಹೇಗಿದೆ ಎಂದು ನೋಡುವುದಾದರೆ,
ಉತ್ತರ ಪ್ರದೇಶ ದ ಒಟ್ಟು ಮತದಾರರ ಸಂಖ್ಯೆ -14.05 ಕೋಟಿ
ಪುರುಷರು ಮತದಾರರು – 7.7 ಕೋಟಿ
ಮಹಿಳಾ ಮತದಾರರು – 6.3 ಕೋಟಿ
ತೃತೀಯ ಲಿಂಗ ಮತದಾರರು – 6,983
ಒಟ್ಟು ಮತದಾರರ ಪೈಕಿ – 4.4 ಕೋಟಿಯಷ್ಟು ಯುವ ಮತದಾರರು ಉತ್ತರ ಪ್ರದೇಶದಲ್ಲಿದ್ದಾರೆ
ಇನ್ನೂ ಜಾತಿ ಲೆಕ್ಕಚಾರ ನೋಡುವುದಾದ್ರೆ
ದಲಿತರು – 21.5% (ಜಾಟ್ ದಲಿತರು 11% )
ಮುಸ್ಲಿಂಮರು – 19. 3%
ಮೆಲ್ವವರ್ಗದ ಜಾತಿಗಳು – 22%
ಕ್ರಿಶ್ಚಿಯನ್ನರು -0.18%
ಹಿಂದುಳಿದ ವರ್ಗ – 40% ರಷ್ಟಿದ್ದು ಅದರಲ್ಲಿ (ಯಾದವ – 8% , ಲೋಧಿ -7%, ಜಾಟ್ – 1.7% , ಗುಜ್ಜರ್ – 1.3%, ಹೀಗೆ ಹಲವು ಉಪ ಪಂಗಡಗಳಿವೆ)
ಉತ್ತರ ಪ್ರದೇಶದ ಪಶ್ಚಿಮ ವಲಯ ಅತಿ ಹೆಚ್ಚು ಮುಸ್ಲಿಂ, ದಲಿತ ಹಾಗೂ ಹಿಂದೂಳಿದ ವರ್ಗದ ಮತದಾರರಿದ್ದಾರೆ. ಹಾಗಾಗೀ ಈಬಾರಿ 99 ಸೀಟುಗಳನ್ನು ಮುಸ್ಲಿಂರಿಗೆ ನೀಡುವ ಮೂಲಕ ದಲಿತ ಮತ್ತು ಮುಸ್ಲಿಮರಿಗೆ ಬಿಎಸ್ಪಿಯ ನಾಯಕಿ ಮಾಯಾವತಿ ಮಣೆ ಹಾಕಿದ್ರೆ, ಎಸ್ಪಿ ಕೂಡಾ 59 ಸೀಟುಗಳನ್ನು ಮುಸ್ಲಿಂ ರಿಗೆ ನೀಡಿ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಮುಸ್ಲಿಂ ಓಟ್ ಇಬ್ಭಾಗವಾಗದಂತೆ ಯಾದವ- ಮುಸ್ಲಿಂ ಧೃವೀಕರಣ ಮಾಡಿಕೊಂಡಿದ್ದಾರೆ.
ಕಳೆದ ಲೋಕಸಭೆಯಲ್ಲಿ ಅತಿ ಹೆಚ್ಚು ಸೀಟುಗಳು ಗೆಲ್ಲುವ ಮೂಲಕ ಸದ್ದು ಮಾಡಿದ ಬಿಜೆಪಿ ಈ ಬಾರಿ ವಿಧಾನ ಸಭೆಯಲ್ಲಿ ನಿರ್ಲಕ್ಷ್ಯ ಮಾಡುವಂತಿಲ್ಲ. ನೋಟ್ ಬ್ಯಾನ್ ಎಫೆಕ್ಟ್, ಮೋದಿ ಅಲೆ ಮುಖ್ಯವಾಗಿದ್ದು ಸ್ವತಃ ಪ್ರಧಾನ ಮಂತ್ರಿ ಅಖಾಡಕ್ಕೆ ಇಳಿದು ಪ್ರಚಾರದಲ್ಲಿ ಭಾಗವಹಿಸುತ್ತಿದ್ದು, ಜೊತೆಗೆ ರಾಮ ಮಂದಿರ ನಿರ್ಮಾಣದ ಆಸೆ ತೋರಿಸುವ ಬಿಜೆಪಿ ಗೆಲ್ಲುವ ತಂತ್ರ ಹೆಣೆದಿದೆ. ಇದರ ಜೊತೆಗೆ ಪಶ್ಚಿಮ ಭಾಗದಲ್ಲಿ ಅತಿ ಹೆಚ್ಚು ಪ್ರಭಾವಶಾಲಿಯಾದ ಪಕ್ಷ ಪಕ್ಷ ಆರ್ಎಲ್ಡಿ. ಆರ್ಎಲ್ಡಿ ಪ್ರತಿನಿಧಿಸುವ ಜಾಟ್ ಸಮುದಾಯದ ಸಂಖ್ಯೆ ಕಡಿಮೆ ಇದ್ದರೂ ಇತರರ ಮೇಲೆ ಪರಿಣಾಮ ಬೀರುವ ಪ್ರಭಾವ ಜಾಸ್ತಿ. ಮಾಜಿ ಪ್ರಧಾನಿ ಚೌದರಿ ಚರಣ್ ಸಿಂಗ್ ನೇತೃತ್ವದಲ್ಲಿ ಸಾಕಷ್ಟು ರಣ ತಂತ್ರಗಳನ್ನು ಹೂಡಿ ಒಂದಿಷ್ಟು ಸೀಟುಗಳು ಬಾಚ್ಚಿಕೊಳ್ಳುವ ಸಾಧ್ಯತೆಯಿದೆ.
ಒಟ್ಟಿನಲ್ಲಿ ಮೊದಲ ಹಂತದಲ್ಲಿ ಹೆಚ್ಚು ಖಾತೆಗಳನ್ನು ತೆಗೆಯಲು ಹರ ಸಾಹಸಪಟ್ಟು ಪಕ್ಷಗಳು ಈಗಾಗಲೇ ಸಾಕಷ್ಟು ಪ್ರಚಾರ ಮಾಡಿದೆ. ಅಖಿಲೇಶ್ ಮತ್ತು ರಾಹುಲ್ ಗಾಂಧಿ ಯುವ ನಾಯಕರು, ಯುವಕರ ಮತ ತೆಕ್ಕೆಗೆ ತೆಗೆದುಕೊಳ್ಳುವುವರ ಅಥವಾ ಮೋದಿ ಅಲೆಯಲ್ಲಿ ಆನೆಯೂ ಕೂಡಾ ತೂರಿ ಹೋಗುತ್ತಾ ಎನ್ನುವುದನ್ನು ಮತದಾರ ಪ್ರಭುಗಳು ನಿರ್ಧರಿಸಲಿದ್ದಾರೆ.