ಬೆಂಗಳೂರು: ಹಿರಿಯ ನಟ, ನಿರ್ದೇಶಕ ಕಾಶಿನಾಥ್ ವಿಧಿವಶರಾಗಿದ್ದಾರೆ. ಬೆಂಗಳೂರಿನ ಶ್ರೀಶಂಕರ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕಾಶಿನಾಥ್ ನಿಧನರಾಗಿದ್ದು, 2 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಇಂದು ಕೊನೆಯುಸಿರೆಳೆದಿದ್ದಾರೆ.
ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಟ, ನಿರ್ದೇಶಕರಲ್ಲಿ ಕಾಶಿನಾಥ್ ಕೂಡ ಒಬ್ಬರು. ಡಬಲ್ ಮಿನಿಂಗ್ ಡೈಲಾಗ್ನಿಂದಲೇ ಫೇಮಸ್ ಆದ ಇವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಯುವಪ್ರತಿಭೆಗಳಗೆ ಅವಕಾಶ ನೀಡಿದ್ದಾರೆ. ಕಾಶಿನಾಥ್ ಸಾವಿನ ಸುದ್ದಿ ಕೇಳಿ ಸಿನಿರಂಗ ಹಾಗೂ ರಾಜಕೀಯ ರಂಗದ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದು, ‘ದಿ-ವಿಲನ್’ ಚಿತ್ರತಂಡ ಚಿತ್ರೀಕರಣವನ್ನು ಸ್ಥಗಿತಗೊಳಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ.
ಕಾಶಿನಾಥ್ ರವರಿಗೆ ದಿ-ವಿಲನ್ ಚಿತ್ರತಂಡದಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಚಿತ್ರೀಕರಣವನ್ನು ಸ್ಥಗಿತಗೊಳಿಸಿದ್ದೇವೆ. ನೀವು ನಮ್ಮಿಂದ ಯಾವತ್ತೂ ದೂರವಾಗೋದಿಲ್ಲ ಎಂದು ದಿ- ವಿಲನ್ ಚಿತ್ರತಂಡ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.
ಕಾಶಿನಾಥ್ ವಿಧಿವಶರಾಗಿರೋ ಹಿನ್ನೆಲೆಯಲ್ಲಿ ನಟ ಉಪೇಂದ್ರ, ಶಿವರಾಜ್ಕುಮಾರ್, ಸುದೀಪ್, ತರುಣ್ ಸುಧೀರ್, ವಿ. ಮನೋಹರ್, ಬಿಗ್ಬಾಸ್ ಪ್ರಥಮ್, ಸೇರಿದಂತೆ ಹಲವಾರು ಚಿತ್ರರಂಗದ ಕಲಾವಿದರು ಅಂತಿಮ ದರ್ಶನ ಪಡೆದಿದ್ದಾರೆ. ಕಾಶಿನಾಥ್ ಅವರ ಮಗಳು ದುಬೈನಿಂದ ಬಂದ ನಂತರ ಅಂತಿಮ ವಿಧಿವಿಧಾನ ನಡೆಯಲಿದೆ. ಇಂದು ಸಂಜೆ ನಾಲ್ಕು ಗಂಟೆಗೆ ಚಾಮರಾಜಪೇಟೆಯ ಟಿಆರ್ ಮಿಲ್ನಲ್ಲಿನ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.