ಹುಬ್ಬಳಿ: ಹುಬ್ಬಳ್ಳಿ ಧಾರವಾಡ ಜನರೇ ನೀವು ಔಷಧಿ ತೆಗೆದುಕೊಳ್ಳುವ ಮುನ್ನ ಸ್ವಲ್ಪ ಎಚ್ಚರವಿರಲಿ. ಯಾವುದು ನಕಲಿ, ಯಾವುದು ಅಸಲಿ ಎಂಬುದನ್ನು ಖಾತರಿ ಮಾಡಿಕೊಳ್ಳಿ. ಯಾಕೆಂದರೆ ವೃದ್ಧಾಪ್ಯವನ್ನೇ ಬಂಡವಾಳ ಮಾಡಿಕೊಂಡ ಕೆಲವರು ನಕಲಿ ಔಷಧಿ ಕೊಟ್ಟು ಯಾಮಾರಿಸುತ್ತಿದ್ದಾರೆ.
ಹೌದು. ಇಂಥದೊಂದು ನಕಲಿ ಔಷಧಿ ಮಾರಾಟ ಮಾಡುವ ತಂಡ ನಿಮ್ಮನ್ನ ರಸ್ತೆಯಲ್ಲಿ ಮಾತನಾಡಿಸಿ ಯಾಮಾರಿಸುತ್ತಾರೆ. ಆದರೆ ಸದ್ಯ ಇವರನ್ನು ಧಾರವಾಡದಲ್ಲಿ ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ. ರಾಘವೇಂದ್ರ ಆಯುರ್ವೇದಿಕ್ ಎಂಬ ಹೆಸರಿಟ್ಟುಕೊಂಡಿರುವ ಈ ತಂಡ ನಕಲಿ ಔಷಧಿ ಮಾರಾಟ ಮಾಡುತ್ತಿತ್ತು. ವೃದ್ಧ ಜನರು ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಅವರನ್ನು ಮಾತನಾಡಿಸಿ, ನಿಮಗೆ ಒಳ್ಳೆ ಔಷಧಿ ಕೊಡಿಸುತ್ತೇವೆ ಎಂದು ಹೇಳಿ ಲಕ್ಷ ಲಕ್ಷ ಹಣ ಪಡೆದು ಪಾರಾರಿಯಾಗುತ್ತಿದ್ದರು.
ಇವರು ನೀಡಿದ ಔಷಧಿಯಿಂದ ವೃದ್ಧರಿಗೆ ಯಾವುದೇ ಪರಿಣಾಮವಾಗಿಲ್ಲ. ಈ ಹಿನ್ನೆಲೆಯಲ್ಲಿ ಹಲವು ಜನರು ಹುಬ್ಬಳ್ಳಿ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದರು. ಈ ನಿಖರ ಮಾಹಿತಿ ಪಡೆದ ಪೊಲೀಸರು ಧಾರವಾಡದ ಅಂಗಡಿ ಮೇಲೆ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ವೆಂಕಟೇಶ ಹಾಗೂ ಎಲ್ಲಪ್ಪ ಎನ್ನುವವರನ್ನು ನಗರದ ದಾಸನಕೊಪ್ಪ ಕ್ರಾಸ್ ಬಳಿಯ ಅಂಗಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 6 ಲಕ್ಷ ರೂ. ನಗದು ಹಾಗೂ ಚೆಕ್ಗಳನ್ನು ವಶಕ್ಕೆ ಪಡೆದಿದ್ದಾರೆ.