ಬೆಂಗಳೂರು: ಬಿಎಂಟಿಸಿ ಬಸ್ಸೊಂದು ಸೇತುವೆಗೆ ಡಿಕ್ಕಿ ಹೊಡೆದು 10 ಅಡಿ ಆಳದ ನದಿಗೆ ಬಿದ್ದ ಪರಿಣಾಮ ಮೂವರು ಪ್ರಯಾಣಿಕರಿಗೆ ಗಂಭೀರ ಗಾಯಗಳಾದ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಬಳಿ ಇಂದು ನಡೆದಿದೆ.
30 ಮಂದಿ ಪ್ರಯಾಣಿಕರನ್ನೊಳಗೊಂಡ 374ಎಂ ರೂಟ್ನ ಬಿಎಂಟಿಸಿ ಬಸ್ ಕೆಂಗೆರಿಯಿಂದ ನೆಲಮಂಗಲ ಕಡೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ವೇಗವಾಗಿ ಬಂದ ಬಸ್ ಅರ್ಕಾವತಿ ನದಿಯ ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದೆ. ತಾವರೆಕೆರೆ ಬಳಿ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿದೆ. ಘಟನೆಯಿಂದ ಚಾಲಕ ವೆಂಕಟೇಶ್, ನಿರ್ವಾಹಕಿ ಸೇರಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಅಲ್ಲದೆ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕುಟುಂಬವೊಂದು ಕೂಲಿ ಕೆಲಸಕ್ಕೆ ಯಾದಗಿರಿಯಿಂದ ಬಂದಿದ್ದು, ಇದರಲ್ಲಿದ್ದ ಗರ್ಭಿಣಿಯೊಬ್ಬರಿಗೆ ಗಾಯಗಳಾಗಿವೆ. ಘಟನೆ ನಡೆದ ತಕ್ಷಣ ಆಂಬುಲೆನ್ಸ್ ಬಾರದೆ ಕೆಲಕಾಲ ಗರ್ಭಿಣಿ ಪರದಾಡುವಂತಹ ಸ್ಥಿತಿ ಎದುರಾಯಿತು. ಇನ್ನು ಗಂಭೀರವಾಗಿ ಗಾಯಗೊಂಡವರನ್ನು ತಾವರೆಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾವರೆಕೆರೆ ಪೊಲೀಸ್ರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ.