ಮಂಗಳೂರು: ಸೂಸೈಡ್ ಬಾಂಬರ್ ಶಾರೀಕ್ (Cooker Bomb Blast) ಹತ್ಯೆಗೆ ಸಂಚು ನಡೆಯುತ್ತಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ಐಸಿಆರ್ ಮಾಡಿದ ಪೋಸ್ಟ್ ನಲ್ಲೇ ಉಗ್ರರು ಈ ಹತ್ಯೆಯ ಸುಳಿವು ನೀಡಿದ್ದಾರೆ. ಇದೇ ಕಾರಣಕ್ಕೆ ಶಾರೀಕ್ ಚಿಕಿತ್ಸೆ ಪಡೆಯಿತ್ತಿರೋ ಆಸ್ಪತ್ರೆಗೆ ಪೊಲೀಸರು ಭಾರೀ ಬಂದೋಬಸ್ತ್ ನೀಡಿದ್ದಾರೆ.
ಕರಾವಳಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಆತ್ಮಾಹುತಿ ದಾಳಿಕೋರ ಶಾರೀಕ್ನ ಒಂದೊಂದೇ ಉಗ್ರ ಸತ್ಯಗಳು ಬಯಲಾಗ್ತಿದೆ. ಇದರ ಮಧ್ಯೆ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿರುವ ಉಗ್ರ ಶಾರೀಕ್ನನ್ನೂ ಹತ್ಯೆಗೆ ಸಂಚಿನ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ತುಂಗಾತೀರದಲ್ಲಿ ಮಾತ್ರವಲ್ಲ, ಚಾರ್ಮಾಡಿ ತಪ್ಪಲಿನಲ್ಲೂ ನಡೀತಾ ಟ್ರಯಲ್ ಬ್ಲಾಸ್ಟ್?
ಹ್ಯಾಂಡ್ಲರ್ ಗಳು ಸ್ಲೀಪರ್ ಸೆಲ್ಗಳನ್ನು ಆಕ್ಟೀವ್ ಮಾಡಿಸಿ ದಾಳಿ ನಡೆಸೋ ಸಾಧ್ಯತೆ ಇದೆ. ಶಾರೀಕ್ನೊಂದಿಗೆ ಬ್ಯಾಗ್ ಹಾಕಿಕೊಂಡು ಬಂದವನೂ ನಾಪತ್ತೆ ಆಗಿರೋದ್ರಿಂದ ಆತಂಕ ಹೆಚ್ಚಿದೆ. ಹೀಗಾಗಿ ಶಾರೀಕ್ ಚಿಕಿತ್ಸೆ ಪಡೀತಿರೋ ಮಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ. ಶಾರೀಕ್ ಕೊಠಡಿ ಪ್ರವೇಶದ ಬಳಿ ಮೆಟಲ್ ಡಿಟೆಕ್ಟರ್ ಅಳವಡಿಸಿದ್ದು, ಉಗ್ರ ಶಾರೀಕ್ ಚಿಕಿತ್ಸೆಗೆ ಸ್ಪಂದಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇವಿಷ್ಟೇ ಅಲ್ಲದೇ ಶಾರಿಕ್ ಮೊಬೈಲ್ (Shariq Mobile) ನಲ್ಲಿ ಪತ್ತೆಯಾದ 1,200 ವೀಡಿಯೋಗಳು, ಬಾಂಬ್ ತಯಾರಿಕೆ, ಪ್ರಚೋದನೆ, ಐಸಿಸ್, ಅಲ್ಖೈದಾ ವಿಡಿಯೋ ಬಗ್ಗೆ ಪೊಲೀಸರು ತನಿಖೆ ನಡೆಸ್ತಿದ್ದಾರೆ. ಬಹುತೇಕ ಕ್ಯಾಶ್ ವ್ಯವಹಾರವೇ ಮಾಡುತ್ತಿದ್ದ ಶಾರೀಕ್ ದಿನವಿಡೀ ಮೊಬೈಲ್ನಲ್ಲೇ ವೀಡಿಯೋಗಳನ್ನು ನೋಡ್ತಿದ್ದ. ಮನೆಯವ್ರಿಗೆ ಟಿವಿ ನೋಡಲೂ ಬಿಡುತ್ತಿರಲಿಲ್ವಂತೆ. 4 ವರ್ಷಗಳಿಂದ ಈ ರೀತಿ ವಿಚಿತ್ರವಾಗಿ ವರ್ತಿಸುತ್ತಿದ್ದ ಅಂತ ಶಾರೀಕ್ ಕುಟುಂಬಸ್ಥರು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ: ಬಾಂಬ್ ತಂದಿದ್ದು ಒಬ್ಬನ್ನಲ್ಲ, ಇಬ್ಬರು- ತನಿಖೆ ವೇಳೆ ಸ್ಫೋಟಕ ಮಾಹಿತಿ ಬಯಲು
ಒಟ್ಟಿನಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಅತೀ ಮುಖ್ಯ ಸಾಕ್ಷಿ ಶಾರೀಕ್ನನ್ನು ಜೀವಂತವಾಗಿ ಉಳಿಸಲು ಪೊಲೀಸರು ಮತ್ತು ವೈದ್ಯರು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ.