ವಿಜಯಪುರ: ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ಕೊಟ್ಟ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ವಿಜು ಬಡಿಗೇರನನ್ನು ಮಹಾರಾಷ್ಟ್ರದಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ವಿಜು ಬಡಿಗೇರ ಬಂಧನಕ್ಕಾಗಿ ಸಿಸಿಬಿ ಅಧಿಕಾರಿಗಳ 7 ಜನರ ತಂಡ ವಿಜಯಪುರ ಜಿಲ್ಲೆಯಲ್ಲಿ ಎರಡು ದಿನದಿಂದ ಬೀಡು ಬಿಟ್ಟಿತ್ತು. ಇದರಲ್ಲಿ 6 ಜನರ ತಂಡ ವಿಜು ಬಗ್ಗೆ ಮಾಹಿತಿ ಕಲೆ ಹಾಕಿ ಸೋಮವಾರ ಮೀರಜ್ ಗೆ ತೆರಳಿದ್ದರು. ಈ ವೇಳೆ ಪುಣೆಯಿಂದ ಬಂದಿದ್ದ ವಿಜು ಮೀರಜ್ ನಲ್ಲಿದ್ದ ಸಂಬಂಧಿಕರ ಮನೆಯಲ್ಲಿ ಅವಿತುಕೊಂಡಿದ್ದ.
ಈ ವೇಳೆ ಫೋನ್ ಟ್ರೇಸ್ ಮಾಡಿದ ಪೊಲೀಸರು ಮೀರಜ್ ಸ್ಥಳೀಯ ಪೊಲೀಸರ ಸಹಾಯದಿಂದ ವಿಜು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ವಿಜುವನ್ನು ಮೀರಜ್ನಿಂದ ಬೆಂಗಳೂರಿಗೆ ಸಿಸಿಬಿ ಪೊಲೀಸರು ಈಗ ಕರೆದುಕೊಂಡು ಬರುತ್ತಿದ್ದಾರೆ.
ಯಾರು ಈ ವಿಜಿ ಬಡಿಗೇರ?
ಈ ಪ್ರಕರಣದಲ್ಲಿ ಈಗಾಗಲೇ ಬಂಧಿತನಾಗಿರುವ ಶಶಿಧರ ಮುಂಡೆವಾಡಿ ಪತ್ನಿಯ ಅಣ್ಣನೇ ವಿಜಿ ಬಡಿಗೇರ. ಮುಂಡೇವಾಡಿ ಜತೆ ಅಕ್ರಮ ಶಸ್ತ್ರಾಸ್ತ್ರ ಮಾರಾಟ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ. ವಿಜಯಪುರ ಜಿಲ್ಲೆಯಲ್ಲೇ ಈತ ಅವಿತು ಕುಳಿತಿದ್ದಾನೆ ಎನ್ನುವ ಅನುಮಾನದಲ್ಲಿ ಸಿಸಿಬಿ ಪೊಲೀಸರು ಸಿಂದಗಿ, ಇಂಡಿ, ಚಡಚಣ ವ್ಯಾಪ್ತಿಯಲ್ಲಿ ಶೋಧ ನಡೆಸಿದ್ದಾರೆ. ಪೊಲೀಸರು ಶೋಧ ನಡೆಸುತ್ತಿರುವ ವಿಚಾರ ತಿಳಿದು ಈಗ ಪುನಾಗೆ ತೆರಳಿ ಬಳಿಕ ಮೀರಜ್ ನಲ್ಲಿ ತಂಗಿದ್ದ.
ಭೀಮಾ ತೀರದ ರೌಡಿ ಚಂದಪ್ಪ ಹರಿಜನನ ಮಾಹಿತಿದಾರನಾಗಿ ಕೆಲಸ ಮಾಡಿದ್ದ ವಿಜಿ, ವಿಜಯಪುರದಲ್ಲಿ ನಡೆದ ಕಂಡಕ್ಟರ್ ಲಾಳಸಂಗಿ ಹತ್ಯೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.