ಬಳ್ಳಾರಿ: ಗಡಿನಾಡು ಬಳ್ಳಾರಿ ಅಂದ್ರೆ ಸಾಕು ಸುಡುಬಿಸಿಲು ನೆನಪಾಗೋದು ಸಹಜ. ಈ ಬಾರಿಯ ಬಿಸಿಲಿನ ರುದ್ರನರ್ತನಕ್ಕೆ ಜನರು ಸುಸ್ತಾಗಿ ಹೋಗಿದ್ದಾರೆ. ಬೇಸಿಗೆಯ ಆರಂಭದ ದಿನಗಳಲ್ಲೇ ಗಣಿ ನಾಡಿನ ತಾಪಮಾನ 42 ಡಿಗ್ರಿ ತಲುಪಿದೆ. ಹೀಗಾಗಿ ಪ್ರಾಣಿ ಪಕ್ಷಿಗಳ ಸ್ಥಿತಿ ಹೇಳತೀರದಾಗಿದೆ. ಆದ್ರೆ ಬಳ್ಳಾರಿ ಪೊಲೀಸ್ ಇಲಾಖೆ ತಾಪಮಾನ ಹೆಚ್ಚಾಗುತ್ತಿದ್ದಂತೆ ಇಲಾಖೆಯ ಶ್ವಾನಗಳಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಬಳ್ಳಾರಿಯಲ್ಲೀಗ ಉಷ್ಣಾಂಶ 42 ಡಿಗ್ರಿಯಿಂದ 45 ಡಿಗ್ರಿ ತಲುಪುತ್ತಿದ್ದಂತೆ ಜನರು, ಪ್ರಾಣಿಗಳು ಬಿರುಬಿಸಿಲಿನ ತಾಪಕ್ಕೆ ಸುಸ್ತಾಗಿ ಹೋಗುತ್ತಿವೆ. ಹೀಗಾಗಿ ಬಳ್ಳಾರಿಯ ಪೊಲೀಸ್ ಇಲಾಖೆಯ ಶ್ವಾನಗಳಿಗೆ ಇದೀಗ ಎಸಿ, ಏರ್ಕೂಲರ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಎಳನೀರು, ಹೆಚ್ಚುವರಿ ತಣ್ಣೀರು ಹಾಗೂ ದ್ರವರೂಪದ ಆಹಾರ ನೀಡಲಾಗ್ತಿದೆ.
ಜಿಲ್ಲೆಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಉಷ್ಣಾಂಶ ದಾಖಲಾಗುತ್ತಿರುವುದರಿಂದ ಜನರು ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆಯಲ್ಲಿ ಪೊಲೀಸರ ಕರ್ತವ್ಯದ ಜೊತೆ ಕೈ ಜೋಡಿಸಿ ಕೆಲಸ ಮಾಡುವ ಶ್ವಾನಗಳಿಗೆ ಬೇಸಿಗೆಯ ಬಿಸಿಲಿನ ತಾಪ ತಟ್ಟದಂತೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಕೆನಡಾ, ಜರ್ಮನ್ ಮೂಲದ ತಳಿಯ 5 ಶ್ವಾನಗಳ ರೂಂಗಳಿಗೆ ಕೂಲರ್ ಅಳವಡಿಸಿ, ದಿನದ 24 ಗಂಟೆಯ ಕಾಲ ತಂಪಾದ ವ್ಯವಸ್ಥೆ ಮಾಡಲಾಗಿದೆ.