ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸರ್ಕಾರ ನಿಗೂಢ ನಿಧಿ ಹಿಂದೆ ಬಿದ್ದಿದೆ. ಬಂಗಾರದ ನಾಣ್ಯ, ಬಂಗಾರ ಸೇರಿದಂತೆ ಅಪಾರ ಸಂಪತ್ತು ಸಿಗುತ್ತೆ ಎಂಬ ನಿರೀಕ್ಷೆಯಲ್ಲಿ ಸರ್ಕಾರ ಇದೆ. 29 ವರ್ಷದ ಯುವಕ ಹೇಳಿದ ಕನಸು ನಂಬಿ ಭೂಮಿ ಅಗೆಯಲು ಚಿಂತನೆ ನಡೆಸಿದೆ.
ನನಗೆ ಕನಸು ಬಿದ್ದಿದೆ, ನನ್ನ ಕನಸಲ್ಲಿ ಅಪಾರ ಸಂಪತ್ತಿರುವ ಮಾಹಿತಿ ಸಿಕ್ಕಿದೆ. ಆ ರಹಸ್ಯ ಬಂಗಲೆಯಲ್ಲಿ ಶೋಧ ಕೈಗೊಂಡರೆ ಅಪಾರ ಪ್ರಮಾಣದ ನಿಧಿ ಸಿಗಲಿದೆ. ಆ ನಿಧಿಯನ್ನು ಈ ರಾಜ್ಯದ ಉದ್ಧಾರಕ್ಕೆ ಬಳಸಿಕೊಳ್ಳಬಹುದು ಎಂದು ತುಮಕೂರಿನ 29 ವರ್ಷದ ಪ್ರದ್ಯುಮ್ನ ಯಾದವ್ ಎಂಬ ವ್ಯಕ್ತಿ ಸಿಎಂಗೆ ಪತ್ರ ಬರೆದಿದ್ದಾರೆ.
ಪ್ರದ್ಯುಮ್ನ ಅವರಿಗೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಪ್ರಾಚೀನ ಬಂಗಲೆಯಲ್ಲಿ ಅಪಾರ ನಿಧಿಯಿರುವ ಕನಸು ಬಿದ್ದಿದೆಯಂತೆ. 2 ಬಂಗಲೆ, 6 ರೂಂಗಳಲ್ಲಿ ಅಪಾರ ಚಿನ್ನಭಾರಣ, ಸಂಪತ್ತಿದೆಯಂತೆ. 300 ವರ್ಷಗಳ ಹಿಂದೆ ಈ ಪ್ರದೇಶವನ್ನು ಆಳುತ್ತಿದ್ದ ಯದುನಂದನ ಚಿತ್ರಭೂಪಾಲ ಸಾಮ್ರಾಟ, ಸಾಮ್ರಾಜ್ಯದ ಮೇಲೆ ದಾಳಿಯಾಗುವ ಭಯದಲ್ಲಿ ಸಂಪತ್ತನ್ನು 6 ಕೋಣೆಗಳಲ್ಲಿ ಬಚ್ಚಿಟ್ಟಿದ್ದನಂತೆ.
ಪದ್ಯುಮ್ನ ಪತ್ರದ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲನೆ ಮಾಡುವಂತೆ ಪ್ರಾಚ್ಯವಸ್ತು ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಸಿದ್ದರಾಮಯ್ಯ ಕಾರ್ಯದರ್ಶಿ ಎಲ್ಕೆ ಅತೀಕ್ ಪತ್ರ ಬರೆದಿದ್ದಾರೆ. ಅಲ್ಲದೆ ಈ ಬಗ್ಗೆ ಪರಿಶೀಲಿಸುವಂತೆ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮಾಜ ಕಲ್ಯಾಣ ಸಚಿವ ಆಂಜನೇಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪತ್ರ ಬರೆದಿದ್ದಾರೆ.