ಬೆಂಗಳೂರು: ಶಾಲಾ ವಿದ್ಯಾರ್ಥಿನಿಯರಿಗೆ ಇನ್ಮುಂದೆ ಚೂಡಿದಾರ್ ಭಾಗ್ಯ ಸಿಗಲಿದೆ. ಈಗಾಗಲೇ ಹಲವು ಭಾಗ್ಯಗಳ ಸರದಾರರಾಗಿರುವ ಸಿಎಂ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ 2017-18ನೇ ಸಾಲಿನ ಬಜೆಟ್ನಲ್ಲಿ, 8 ರಿಂದ 10ನೇ ತರಗತಿ ವಿದ್ಯಾರ್ಥಿನಿಯರಿಗೆ ಸಮವಸ್ತ್ರವನ್ನಾಗಿ ಚೂಡಿದಾರ್ ನೀಡುವುದಾಗಿ ಪ್ರಕಟಿಸಿದ್ದಾರೆ.
ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಪ್ರೇರಣೆಗಾಗಿ ಹಲವು ಹೊಸ ಘೋಷಣೆಗಳನ್ನೂ ಸಿಎಂ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ವಿತರಣೆ ಮಾಡುವುದಾಗಿಯೂ ಘೋಷಿಸಿದ್ದಾರೆ. ವಾರದಲ್ಲಿ 5 ದಿನ ಹಾಲು ವಿತರಣೆ ಯೋಜನೆ ಕೂಡ ಇದ್ದು, ಇದನ್ನು ಜುಲೈ ತಿಂಗಳಿನಿಂದ ಜಾರಿಗೆ ತರುವುದಾಗಿ ಹೇಳಿದ್ದಾರೆ.
ಮಧ್ಯಾಹ್ನ ಬಿಸಿಯೂಟ ಕಾರ್ಯಕ್ರಮದ ಅಡಿ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ 4 ಲಕ್ಷ ಮಕ್ಕಳಿಗೆ ಸಾರವರ್ಧಕ ಅಕಿಯನ್ನು 4 ಜಿಲ್ಲೆಗಳಿಗೆ ವಿಸ್ತರಣೆ ಮಾಡಲಾಗುವುದು. ಶಾಲಾ ಗ್ರಂಥಾಲಯಗಳಿಗೆ ಸಾಮಾಜಿಕ ಸಂದೇಶವುಳ್ಳ ಕಥಾ ಪುಸ್ತಕಗಳು, ದೃಷ್ಟಿ ಪರೀಕ್ಷೆ ಮತ್ತು ಕನ್ನಡಕಗಳ ವಿತರಣೆ, 50 ಸಾವಿರ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಪ್ರಮುಖ ವಿಷಯಗಳಲ್ಲಿ ಮಧ್ಯಮ ಮತ್ತು ದೀರ್ಘ ಅವಧಿಯ ಅವಶ್ಯಾಧಾರಿತ ಪುನರ್ ರಚನಾ ತರಬೇತಿ ನೀಡುವ ಯೋಜನೆಯನ್ನು ಸಿಎಂ ಪ್ರಕಟಿಸಿದ್ದಾರೆ.