ಹಾವೇರಿ: ಭಾರತೀಯ ಮೂಲದ ರಿಷಿ ಸುನಾಕ್ (Rishi Sunak) ಬ್ರಿಟನ್ ಪ್ರಧಾನಿಯಾಗಿ ಆಯ್ಕೆ ಆಗಿದ್ದಕ್ಕೆ ಸಂತಸ ಹಾಗೂ ಹೆಮ್ಮೆ ಆಗುತ್ತಿದೆ. ಬ್ರಿಟಿಷರು ನಮ್ಮನ್ನು ಎರಡುನೂರು ವರ್ಷಗಳ ಕಾಲ ಆಳಿದರು. ಒಬ್ಬ ಭಾರತೀಯ ಪ್ರಧಾನಿ ಆಗುತ್ತಾನೆ ಅನ್ನೋದನ್ನು ಅವರು ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲ. ಈಗ ಚಕ್ರ ತಿರುಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ರಿಷಿ ಸುನಾಕ್ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದಲ್ಲಿ ಕಿತ್ತೂರು ಚೆನ್ನಮ್ಮ ಮೂರ್ತಿಗೆ ಮಾರ್ಲಾಪಣೆ ಮಾಡಿದ ನಂತರ ಮಾತನಾಡಿದ ಅವರು, ಭಾರತೀಯರು ಎಲ್ಲ ರಂಗದಲ್ಲೂ ಮುಂದಿದ್ದಾರೆ. ಬಹಳ ಜನರು ಅಲ್ಲಿ ಎಂಪಿಗಳಾಗಿದ್ದಾರೆ. ಈಗ ಬ್ರಿಟನ್ ಪ್ರಧಾನಿ (British Prime Minister) ಆಗಿರೋದು ವಿಶೇಷವಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: UK ಪ್ರಧಾನಿಯಾದ ರಿಷಿ ಸುನಾಕ್ – ಸಾಮಾಜಿಕ ಜಾಲತಾಣದಲ್ಲಿ ಆಶಿಶ್ ನೆಹ್ರಾ ಫೋಟೋ ಟ್ರೆಂಡ್
ಚೆನ್ನಮ್ಮನ ಶಕ್ತಿಯೊಂದಿಗೆ ರಾಜ್ಯದಲ್ಲಿ ಸ್ತ್ರೀ ಸಾಮರ್ಥ್ಯ ಯೋಜನೆ ಜಾರಿ ಮಾಡುತ್ತಿದ್ದೇವೆ. ಪ್ರತಿ ಗ್ರಾಮದಲ್ಲಿ ಎರಡೆರಡು ಸ್ತ್ರೀ ಶಕ್ತಿ ಸಂಘಗಳಿಗೆ ಐದೈದು ಲಕ್ಷ ರೂಪಾಯಿ ಸಾಲ ಮತ್ತು ಅನುದಾನ ಕೊಡುತ್ತಿದ್ದೇವೆ. ಐದು ಲಕ್ಷ ಮಹಿಳೆಯರಿಗೆ ಉದ್ಯೋಗ ಕೊಡುವ ಕಾರ್ಯಕ್ರಮ ಮಾಡುತ್ತಿದ್ದೇವೆ. ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುತ್ತೇವೆ. ಯುವಕರಿಗಾಗಿ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ ಜಾರಿಗೆ ಮಾಡುತ್ತಿದ್ದೇವೆ. ಪ್ರತಿ ಗ್ರಾಮದಲ್ಲಿ ಎರಡು ಯುವಶಕ್ತಿ ಸಂಘಗಳಿಗೆ ಐದೈದು ಲಕ್ಷ ರೂಪಾಯಿ ಅನುದಾನ ಕೊಡುತ್ತಿದ್ದೇವೆ. ಐದು ಲಕ್ಷ ಯುವಕರಿಗೆ ಕೆಲಸ ಕೊಡುವ ಯೋಜನೆ. ಎರಡೂ ಯೋಜನೆಗಳನ್ನು ಡಿಸೆಂಬರ್ನಲ್ಲಿ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬ್ರಿಟನ್ ನೂತನ ಪ್ರಧಾನಿ ಭಾರತ ಮೂಲದ ರಿಷಿ ಸುನಾಕ್ ಬಗ್ಗೆ ನೀವು ತಿಳಿಯಲೇಬೇಕಾದ ಸಂಗತಿಗಳಿವು
ಈಗಾಗಲೇ ಗೆಜೆಟ್ ನೋಟಿಫಿಕೇಷನ್ ಆಗಿದೆ. ಬರುವ ವಿಧಾನಸಭೆ ಅಧಿವೇಶದನಲ್ಲಿ ಅನುಮೋದನೆ ಪಡೆದುಕೊಳ್ತೇವೆ. ನನಗೆ ಈ ವಿಚಾರದಲ್ಲಿ ಬಹಳ ಸಂತೋಷ ಆಗುತ್ತಿದೆ. ಡಾ.ನಾಗಮೋಹನ ದಾಸ್ ವರದಿಯನ್ನು ಅನುಷ್ಠಾನ ಮಾಡಿಸುವ ಕೆಲಸವನ್ನು ನಾವು ಮಾಡ್ತಿದ್ದೇವೆ. ಆ ಎಲ್ಲ ಜನಾಂಗದ ಮಕ್ಕಳಿಗೆ ನಾನು ಶುಭಾಶಯಗಳನ್ನು ಹೇಳುತ್ತೇನೆ. ಈ ವಿಚಾರದಲ್ಲಿ ಸಿದ್ದರಾಮಯ್ಯನವರ (Siddaramaiah) ಹೇಳಿಕೆ ಬಗ್ಗೆ ನಾನು ಮಾತನಾಡೋದಿಲ್ಲ. ಅದರ ಬಗ್ಗೆ ನಾನು ಚರ್ಚೆ ಮಾಡೋಕೆ ಹೋಗೋದಿಲ್ಲ. ನನ್ನ ಕರ್ತವ್ಯ, ಬದ್ಧತೆ ಏನಿದೆ ಅದನ್ನು ಮಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.