ಬೆಂಗಳೂರು: ಕನ್ನಡ ನಾಡಿನಲ್ಲಿ `ಮೂರೇ ಮೂರು ಪೆಗ್ಗಿಗೆ’ ಹಾಡಿನ ಮೂಲಕ ಫೀನಿಕ್ಸ್ ನಂತೆ ಎದ್ದು ಬಂದ ಅದೇ ಚಂದನ್ ಶೆಟ್ಟಿ ಬಿಗ್ ಬಾಸ್ ವೇದಿಕೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಬಿಗ್ ಬಾಸ್ ಪಟ್ಟವನ್ನು ತಮ್ಮದಾಗಿಸಿಕೊಂಡ ಚಂದನ್ ಶೆಟ್ಟಿಗೆ ಚಿತ್ರರಂಗ ಹಾಗೂ ಸಹ ಸ್ಪರ್ಧಿಗಳು ಶುಭಾಶಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
ಕನ್ನಡಿಗರ ಮನಗೆದ್ದು ಬಿಗ್ ಬಾಸ್ ಪಟ್ಟ ಅಲಂಕರಿಸಿದ ಚಂದನ್ ಶೆಟ್ಟಿ ಸೋಮವಾರ ರಾತ್ರಿ ಪಬ್ಲಿಕ್ ಟಿವಿ ಕಚೇರಿಗೆ ಆಗಮಿಸಿದ್ದರು. ಈ ವೇಳೆ ಚಂದನ್ ಅವರಿಗೆ ಶುಭಾಶಯ ತಿಳಿಸಲು ಅಭಿಮಾನಿಗಳ ದಂಡೇ ಆಗಮಿಸಿತ್ತು. ಇದೇ ಸಂದರ್ಭದಲ್ಲಿ ಬಂದಂತಹ ಅಭಿಮಾನಿಯೊಬ್ಬ ತಮ್ಮ ಹೊಸ ಗಿಟಾರ್ ಮೇಲೆ ಚಂದನ್ ಅವರ ಅಟೋಗ್ರಾಫ್ ಪಡೆಯಲು ಇಚ್ಛಿಸಿದ್ದರು. ಕೂಡಲೇ ಚಂದನ್ ಶೆಟ್ಟಿ ಅವರು ಅಭಿಮಾನಿಯ ಆಸೆ ಈಡೇರಿಸಿದ್ರು. ನಂತರ ಆ ಗಿಟಾರ್ ಹಿಡಿದು ಹಾಡನ್ನು ಕೂಡ ಹಾಡಿದ್ದರು. ಈ ಮೂಲಕ 108 ದಿನಗಳ ಬಳಿಕ ಗಿಟಾರ್ ಹಿಡಿದಿದ್ದು, ಇದು ನನಗೆ ಖುಷಿ ತಂದಿದೆ ಅಂತ ಅವರು ಹೇಳಿದ್ರು.
ಮೊದಲ ಪಬ್ ಅನುಭವ ಹಂಚಿಕೊಂಡ ಶೆಟ್ರು: ಮೈಸೂರಿನಲ್ಲಿ ಚಂದನ್ ಗಿಟಾರ್ ಹಿಡಿದುಕೊಂಡು ಹೋಗಿದ್ದಾಗ ಒಂದು ಘಟನೆ ನಡೆದಿತ್ತು. ಈ ಘಟನೆಯಿಂದ ತುಂಬಾ ಬೇಸರವಾಗಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಈಗ ಈ ಘಟನೆಯ ಬಗ್ಗೆ ಮೊದಲ ಬಾರಿ ಹೇಳಲು ಇಷ್ಟಪಡುತ್ತೇನೆ ಅಂದ ಶೆಟ್ರು, ಮೈಸೂರಿನ ಬಸ್ ಸ್ಟಾಪ್ ಹತ್ತಿರವಿರುವ ಪಬ್ಗೆ ನನ್ನ ಗಿಟಾರ್ ಹಿಡಿದುಕೊಂಡು ಹೋಗಿದ್ದೆ. ಅದು ನಾನು ಮೊದಲ ಬಾರಿಗೆ ಪಬ್ಗೆ ಹೋಗಿರುವುದು. ಅಲ್ಲಿ ಹೋದ ಮೇಲೆ ಕನ್ನಡ ಹಾಡನ್ನು ಹಾಕಲು ಹೇಳಿದೆ. ಆದರೆ ಅವರು ಒಪ್ಪಲಿಲ್ಲ. ನಾನು ತುಂಬಾನೇ ಒತ್ತಾಯ ಮಾಡಿದೆ ಆಗ ಬೌನ್ಸರ್ ಗಳು ನನ್ನನ್ನು ಹಿಡಿದು ಪಬ್ನಿಂದ ಹೊರ ಹಾಕಿದ್ದರು. ಅವರು ನನ್ನನ್ನು ಹೊರ ಹಾಕಿರುವುದೇ ಇಂದು ನನಗೆ ಸ್ಫೂರ್ತಿ ಆಯಿತು. ಈ ಘಟನೆಯಿಂದ ನಾನು ಬೇಸರಗೊಂಡೆ. ಆದರೆ ಅಂದೇ ನಾನು ಮುಂದಿನ ದಿನಗಳಲ್ಲಿ ನನ್ನ ಹಾಡುಗಳು ಈ ಪಬ್ ನಲ್ಲಿ ಪ್ಲೇ ಆಗ್ಲೇಬೇಕು ಎಂದು ಡಿಸೈಡ್ ಮಾಡಿದೆ. ಪರಿಣಾಮ ಈಗ ಇಡೀ ಕರ್ನಾಟಕ, ದುಬೈ, ಆಸ್ಟ್ರೇಲಿಯಾ ಹಾಗೂ ಜರ್ಮನಿಯ ಪಬ್ ಗಳಲ್ಲಿ ಈ ಹಾಡು ಪ್ಲೇ ಆಗುತ್ತಿರುವುದಕ್ಕೆ ನನಗೆ ಸಂತಸ ತಂದಿದೆ ಎಂದರು.
105 ದಿನ ಬಿಗ್ಬಾಸ್ ಮನೆಯಲ್ಲಿ ಭರ್ಜರಿ ಮನರಂಜನೆ ನೀಡಿ ಜನರ ಮನ ಗೆದ್ದಿದ್ದ ಚಂದನ್ ಶೆಟ್ಟಿಯನ್ನು ಅಭಿಮಾನಿಗಳು ಅದ್ಧೂರಿಯಾಗಿ ಬರಮಾಡಿಕೊಂಡರು. ಮೆರವಣಿಗೆ ಮೂಲಕ ಸಾವಿರಾರು ಜನರೊಂದಿಗೆ ಆಗಮಿಸಿದ್ದರು. ನಗರದಲ್ಲಿರೋ ಆಂಜನೇಯ ದೇವಸ್ಥಾನಕ್ಕೆ ತೆರಳಿ ಚಂದನ್ ಶೆಟ್ಟಿ ಪೂಜೆ ಸಲ್ಲಿಸಿ ಪಬ್ಲಿಕ್ ಟಿವಿಗೆ ಆಗಮಿಸಿದ್ದರು.