ಬೆಂಗಳೂರು: ‘ರಾಜಕುಮಾರ’ ಚಿತ್ರ ಖ್ಯಾತಿಯ ನಿರ್ದೇಶಕ ಸಂತೋಷ್ ಆನಂದ್ ರಾಮ್ ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಿದ್ದಾರೆ. ಬೆಂಗಳೂರಿನ ಜೆ.ಪಿ ನಗರದ ಸಿಂಧೂರಿ ಕನ್ವೆಂಷನ್ ಸೆಂಟರ್ ನಲ್ಲಿ ಆರತಕ್ಷತೆ ನಡೆದಿದೆ.
ಇಂದು ಬೆಳಗ್ಗೆ ಅದೇ ಹಾಲ್ ನಲ್ಲಿ ಮದುವೆ ಶಾಸ್ತ್ರಗಳು ನಡೆಯಲಿದೆ. ಬೆಳಗ್ಗೆ 11.30 ರ ಶುಭ ಮುಹೂರ್ತದಲ್ಲಿ ಬಳ್ಳಾರಿ ಮೂಲದ ಸುರಭಿ ಹತ್ವಾರ್ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಮಂಗಳವಾರ ಅದ್ಧೂರಿಯಾಗಿ ನಡೆದ ಆರತಕ್ಷತೆ ಸಮಾರಂಭಕ್ಕೆ ಕನ್ನಡ ಚಿತ್ರೋದ್ಯಮದ ಅನೇಕ ಗಣ್ಯರು ಆಗಮಿಸಿದ್ದರು.
ಸಂಜೆ 7 ಗಂಟೆಯಿಂದ 10 ಗಂಟೆ ವರೆಗೆ ನಡೆದ ಆರತಕ್ಷತೆ ಸಮಾರಂಭದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ದಂಪತಿ, ಪುನೀತ್ ರಾಜ್ಕುಮಾರ್ ದಂಪತಿ, ಅನಂತ್ ನಾಗ್ ದಂಪತಿ, ರಮೇಶ್ ಅರವಿಂದ್, ಪ್ರೇಮ್, ರಾಘವೇಂದ್ರ ರಾಜ್ಕುಮಾರ್ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಅನೇಕರು ಆಗಮಿಸಿ ನೂತನ ವಧು-ವರರಿಗೆ ಶುಭಾಶಯ ಕೋರಿದರು.
ಸ್ಯಾಂಡಲ್ ವುಡ್ ನಲ್ಲಿ “ಮಿಸ್ಟರ್ ಆ್ಯಂಡ್ ಮಿಸಸ್ ರಾಮಚಾರಿ” ಚಿತ್ರದ ಮೂಲಕ ನಿರ್ದೇಶನಕ್ಕೆ ಎಂಟ್ರಿ ಕೊಟ್ಟ ಸಂತೋಷ್ ಆನಂದ್ ರಾಮ್ ಅವರ ಮೊದಲ ಚಿತ್ರವೇ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಎರಡನೇ ಚಿತ್ರ “ರಾಜಕುಮಾರ” ಕೂಡ ಅದ್ಧೂರಿ ಹಿಟ್ ಚಿತ್ರ.
ಇದೀಗ ಮದುವೆ ಬಳಿಕ ಸಂತೋಷ್ ಆನಂದ್ ರಾಮ್ ಪುನೀತ್ ರಾಜ್ಕುಮಾರ್ ಗೆ ಮತ್ತೊಂದು ಚಿತ್ರ ನಿರ್ದೇಶನ ಮಾಡಲಿದ್ದಾರೆ. ಇಂದಿನ ಮದುವೆ ಶಾಸ್ತ್ರದಲ್ಲೂ ಅನೇಕ ಗಣ್ಯರು ಭಾಗಿಯಾಗುವ ನಿರೀಕ್ಷೆ ಇದೆ.