ಪುಣೆ: ಇತ್ತೀಚಿನ ದಿನಗಳಲ್ಲಿ ಅಪಘಾತವಾಗಿ ವ್ಯಕ್ತಿ ರಸ್ತೆಯಲ್ಲಿ ಬಿದ್ದು ಗೋಗರೆದ್ರೂ ಸಹಾಯಕ್ಕೆ ಬಾರದ ಅನೇಕ ಘಟನೆಗಳನ್ನು ನೀವು ಓದಿರ್ತೀರಿ. ಅಂತೆಯೇ ಪುಣೆಯಲ್ಲೂ ಕೂಡ ಟೆಕ್ಕಿಯೊಬ್ಬರೂ ಅಪಘಾಕ್ಕೀಡಾಗಿ ರಕ್ತದ ಮಡುವಿನಲ್ಲಿ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದರೂ, ಅವರ ಸಹಾಯಕ್ಕೆ ಬರದೆ ಫೋಟೋ, ವಿಡಿಯೋ ಮಾಡುದ್ರಲ್ಲೇ ಕಾಲ ಕಳೆದ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ.
ಸತೀಶ್ ಪ್ರಭಾಕರ್ ಮೆಟೆ(25) ಎಂಬವರು ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದು ಒದ್ದಾಡಿದ ಸಾಫ್ಟ್ ವೇರ್ ಎಂಜಿನಿಯರ್. ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ತೀವ್ರ ಗಾಯಗೊಂಡ ಮೆಟೆ ಅವರನ್ನು ಕೊನೆಗೂ ವ್ಯಕ್ತಿಯೊಬ್ಬರು ಕರುಣೆ ತೋರಿಸಿ ಆಸ್ಪತ್ರೆಗೆ ದಾಖಲಿಸಿದ್ರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಘಟನೆ ನಗರದ ಭೋಸಾರಿಯಲ್ಲಿ ಬುಧವಾರ ಸಂಜೆ ನಡೆದಿದೆ.
ಘಟನೆ ನಡೆದ ವೇಳೆ ಸ್ಥಳದಲ್ಲಿ ಸುತ್ತ-ಮುತ್ತ ಜನ ಸೇರಿದ್ರೂ, ಎಲ್ಲರೂ ಘಟನೆಯ ಫೋಟೋ ಹಾಗೂ ವಿಡಿಯೋ ಮಾಡುವುದ್ರಲ್ಲೇ ಬ್ಯುಸಿಯಾಗಿದ್ದರು. ಕೆಲ ಹೊತ್ತು ಯಾರೋಬ್ಬರೂ ಸತೀಶ್ ಸಹಾಯಕ್ಕೆ ಬರಲಿಲ್ಲ. ಈ ವೇಳೆ ಡೆಂಟಿಸ್ಟ್ ಡಾಕ್ಟರ್ ಕೇಟ್ ಭೋಸಾರಿಯಲ್ಲಿ ತಮ್ಮ ಕ್ಲಿನಿಕ್ ಗೆ ಹೋಗುತ್ತಿರುವವರು ಅದೇ ಮಾರ್ಗವಾಗಿ ಬಂದ್ರು. ಜನ ನರೆದಿದ್ದನ್ನು ಕಂಡ ವೈದ್ಯರು ಅಲ್ಲೇ ಇಳಿದು ನೋಡಿದಾಗ ಸತೀಶ್ ರಕ್ತದ ಮಡುವಿನಲ್ಲಿ ಬಿದ್ದು, ತಮ್ಮ ಕೈ ಹಾಗೂ ಕಾಲುಗಳನ್ನು ಅಲ್ಲಾಡಿಸುತ್ತಾ ಸಹಾಯಕ್ಕಾಗಿ ಅಂಗಲಾಚುತ್ತಿದ್ದರು. ಕೂಡಲೇ ಕೇಟ್ ಆಟೋವೊಂದನ್ನು ಕರೆದು ಸತೀಶ್ ನನ್ನು ಪಿಂಪ್ರಿಯ ಯಶ್ವಂತ್ರಾವ್ ಚವಾಣ್ ಸ್ಮಾರಕ ಆಸ್ಪತ್ರೆಗೆ ಕರೆದುಕೊಂಡು ಹೋದ್ರು. ಹೀಗೆ ಆಸ್ಪತ್ರೆಗೆ ಕರೆದೊಯ್ಯುವಾಗ ಕೇಟ್ ಗಾಯಗೊಂಡ ವ್ಯಕ್ತಿಯನ್ನು ಸರಿಯಾಗಿ ನೋಡಿದ್ರು. ಗಾಯಾಳು ತಲೆಗೆ, ಕಿವಿ ಹಾಗೂ ಮೂಗಿಗೆ ಗಂಭೀರ ಗಾಯಗಳಾಗಿದ್ದು, ರಕ್ತ ಸೋರುತ್ತಿತ್ತು. ಅಲ್ಲದೇ ಹೊಟ್ಟೆಯ ಮೇಲೆ ವಾಹನದ ಟಯರ್ ಮಾರ್ಕ್ ಕೂಡ ಎದ್ದು ಕಾಣುತ್ತಿತ್ತು.
ಆಸ್ಪತ್ರೆಗೆ ದಾಖಲಿಸಿದ ಬಳಿಕ ವೈದ್ಯರು ಗಾಯಾಳು ಸತೀಶ್ ಗೆ ಪ್ರಥಮ ಚಿಕಿತ್ಸೆ(ಸಿಪಿಆರ್) ನೀಡಲು ಮುಂದಾದ್ರು, ಆದ್ರೆ ಈ ಚಿಕಿತ್ಸೆಗೆ ಸತೀಶ್ ಸ್ಪಂದಿಸಲಿಲ್ಲ. ಹೀಗಾಗಿ ಸತೀಶ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಘಟನೆ ನಡೆದ ಕೂಡಲೇ ನರೆದವರು ಗಾಯಾಳುವನ್ನು ಆಸ್ಪತ್ರೆಗೆ ಸೇರಿಸುತ್ತಿದ್ದರೆ ಸತೀಶ್ ಬದುಕುಳಿಯುತ್ತಿದ್ದರೋ ಏನೋ? ಆದ್ರೆ ಜನ ಘಟನೆಯ ಫೋಟೋ ಹಾಗೂ ವಿಡಿಯೋ ಮಾಡುದ್ರಲ್ಲೇ ಮಗ್ನರಾದ್ರು ಅಂತ ಕೇಟ್ ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಸತೀಶ್ ಮೆಟೆ ಮೂಲತಃ ಔರಂಗಾಬಾದ್ ನವರಾಗಿದ್ದು, ಭೋಸಾರಿಯಾದಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದರು. ಹೀಗಾಗಿ ಅವರು ಪುಣೆಯ ಮೋಶಿ ಪ್ರದೇಶದಲ್ಲಿ ನೆಲೆಸಿದ್ದರು. ಘಟನೆಯ ಬಳಿಕ ಎಚ್ಚೆತ್ತುಕೊಂಡ ಪೊಲೀಸರು ಇಂತಹ ಘಟನೆಗಳು ನಡೆದಾಗ ಕೂಡಲೇ 020-27130003 ನಂಬರಿಗೆ ಕರೆ ಮಾಡುವಂತೆ ಮನವಿ ಜನರಲ್ಲಿ ಮಾಡಿದ್ದಾರೆ.