ತುಮಕೂರು: ದೇವಸ್ಥಾನವೊಂದಕ್ಕೆ ದಲಿತರು ಪ್ರವೇಶ ಮಾಡಿದ್ದರಿಂದ ಕುಪಿತಗೊಂಡ ಸವರ್ಣಿಯ ಮಹಿಳೆ ತನ್ನ ಮೇಲೆ ದೇವರು ಬಂದಂತೆ ನಾಟಕವಾಡಿ ದಲಿತರಿಗೆ ಬೆದರಿಕೆ ಹಾಕಿದ ವಿಲಕ್ಷಣ ಘಟನೆ ನಡೆದಿದೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಬಿಳಿದೇವಾಲಯದ ಕೆಂಕೇರಮ್ಮ ದೇವಸ್ಥಾನದಲ್ಲಿ ಈ ನಾಟಕೀಯ ಬೆಳವಣಿಗೆ ನಡೆದಿದೆ. ಬಿಳಿದೇವಾಲಯದ ಗ್ರಾಮದ ಸವರ್ಣೀಯರು ಸೇರಿದಂತೆ ದಲಿತರಿಂದ ವಂತಿಗೆ ಸಂಗ್ರಹಿಸಿ ಕೆಂಕೇರಮ್ಮನ ಜಾತ್ರೆ ಮಾಡುವುದು ಇಲ್ಲಿನ ವಾಡಿಕೆ. ಆದ್ರೆ ದಲಿತರು ವಂತಿಗೆ ಕೊಡಬೇಕೇ ಹೊರತು ದೇವಸ್ಥಾನದ ಒಳಕ್ಕೆ ಬರುವ ಹಾಗಿಲ್ಲ. ಇದನ್ನೂ ಓದಿ: ವಿಡಿಯೋ: ಶಾಲಾ ಮುಖ್ಯಸ್ಥೆಯ ಮೈಮೇಲೆ ಬಂತಂತೆ ಮಹಾಕಾಳಿ- ತ್ರಿಶೂಲ ಹಿಡಿದು ಅಧಿಕಾರಿಗಳಿಗೆ ಆಜ್ಞೆ
ಭಾನುವಾರ ನಡೆದ ಜಾತ್ರೆಯಲ್ಲಿ ಪ್ರಜ್ಞಾವಂತ ಕೆಲ ದಲಿತ ಯುವಕರು ದೇವಸ್ಥಾನ ಪ್ರವೇಶ ಮಾಡಿದ್ರು. ಇನ್ನೂ ಕೆಲ ದಲಿತರು ಪ್ರವೇಶ ಮಾಡೋದಕ್ಕೆ ಸವರ್ಣೀಯ ಮುಖಂಡರು ಅಡ್ಡಿಪಡಿಸಿದ್ರು. ಪರಿಣಾಮ ಎರಡೂ ಸಮುದಾಯದ ನಡುವೆ ಮಾತಿನ ಚಕಮಕಿ ಉಂಟಾಯಿತು. ಈ ನಡುವೆ ಸವರ್ಣಿಯ ಮಹಿಳೆಯೋರ್ವಳು ಮೈ ಮೇಲೆ ದೇವರು ಬಂದ ನಾಟಕವಾಡಿ, ದಲಿತರು ದೇವಸ್ಥಾನ ಪ್ರವೇಶ ಮಾಡಿದ್ದೀರಾ..? ಇದರಿಂದ ದೇವಸ್ಥಾನ ಮೈಲಿಗೆ ಆಗಿದೆ. ನಿಮಗೆ ವಾಂತಿ ಭೇದಿ ಬಂದು ಸಾಯುತ್ತಿರಾ ಎಂದು ಬೆದರಿಸಿದ್ದಾಳೆ.
ಸವರ್ಣೀಯ ಮಹಿಳೆಯ ಬೆದರಿಕೆಗೆ ಜಗ್ಗದೆ ದಲಿತರು ಸ್ಥಳದಲ್ಲಿ ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ.