ಬೆಂಗಳೂರು: ಮಠದ ಸ್ವಾಮಿ ಎಂದು ನಂಬಿಸಿ ಜನರಿಂದ 500 ರಿಂದ 1000 ರೂ. ಹಣ ಸುಲಿಗೆ ಮಾಡಿದ ಬಳಿಕ, ಕಾವಿ ಬಟ್ಟೆಯನ್ನ ಕಳಚಿ ಮದ್ಯಪಾನ ಮಾಡಿ ಊಟ ಮಾಡುತ್ತಿದ್ದ ಕಳ್ಳ ಸ್ವಾಮಿಗೆ ಸಾರ್ವಜನಿಕರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ನಡೆದಿದೆ.
ಈ ಘಟನೆ ಕಳೆದ ರಾತ್ರಿ ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಕುಣಿಗಲ್ ಬೈಪಾಸ್ ಬಳಿ ನಡೆದಿದ್ದು, ಜನರು ವಂಚಕ ಸ್ವಾಮಿಯ ಬಣ್ಣವನ್ನ ಬಯಲು ಮಾಡಿದ್ದಾರೆ. ಕಾರಿನಲ್ಲಿ ಊರೂರು ತಿರುಗಿ ಈ ಸ್ವಾಮಿ ಜನರಲ್ಲಿ ಆತಂಕ ಮೂಡಿಸಿದ್ದಲ್ಲದೆ, ಆ ಪೂಜೆ ಮಾಡಿಸಿ ಈ ಪೂಜೆ ಮಾಡಿಸಿ. ದೇವರು ಓಳ್ಳೆಯದನ್ನ ಮಾಡುತ್ತಾನೆ ಎಂದು ಬಡ ಜನರನ್ನ ನಂಬಿಸಿ ಹಣ ಸುಲಿಗೆ ಮಾಡುತ್ತಿದ್ದ ಎನ್ನಲಾಗಿದೆ.
ಆದರೆ ಕಳೆದ ರಾತ್ರಿ ಮದ್ಯ ಸೇವನೆ ಮಾಡುವಾಗ ಪ್ರತ್ಯೇಕವಾಗಿ ನೋಡಿದ ಜನರು, ವಂಚಕ ಸ್ವಾಮಿಯನ್ನು ಹಿಡಿದು ಥಳಿಸಿದ್ದಾರೆ. ಇದೇ ವೇಳೆ ವಂಚಕ ಸ್ವಾಮಿಯ ಜೊತೆ ಜನರಿಂದ ಹಣ ಪೀಕಲು ಬಂದಿದ್ದ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಸಈ ಕಳ್ಳ ಸ್ವಾಮಿಯನ್ನ ಹಿಡಿದ ಜನರೇ ನಡುರಸ್ತೆಯಲ್ಲೇ ಕಾವಿ ಬಟ್ಟೆ ತೊಡಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಈತನನ್ನು ವಶಕ್ಕೆ ಪಡೆದ ನೆಲಮಂಗಲ ಪಟ್ಟಣ ಪೊಲೀಸರು ಕಪಟ ಸ್ವಾಮಿಯ ವಿಚಾರಣೆ ನಡೆಸುತ್ತಿದ್ದಾರೆ.