ಉಡುಪಿ: ಆರತಿ ಹಿಡಿದು ಪೂಜೆ ಮಾಡುವ ಕೈಯಲ್ಲಿ ಕ್ರಿಕೆಟ್ ಬ್ಯಾಟ್. ಕಚ್ಚೆ ಎತ್ತಿಕಟ್ಟಿ ಶಾಲನ್ನು ಸೊಂಟಕ್ಕೆ ಬಿಗಿದ ಸ್ವಾಮೀಜಿ. ಪ್ರತೀ ಬಾಲ್ ಗೆ ಫೋರ್.. ಫೋರ್.. ಫೋರ್..
ಹೌದು. ಉಡುಪಿಯಲ್ಲಿ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕ್ರಿಕೆಟ್ ಆಟವಾಡಿದ್ದಾರೆ. ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಫೋರ್ ಗಳ ಸುರಿಮಳೆ ಸುರಿಸಿದ್ದಾರೆ. ರಾಜ್ಯಮಟ್ಟದ ಕ್ರಿಕೆಟ್ ಪಂದ್ಯ ಉದ್ಘಾಟಿಸಿದ ಕಿರಿಯ ಸ್ವಾಮೀಜಿ, ಮಧ್ವ ಟ್ರೋಫಿ ಕ್ರಿಕೆಟ್ ಕೂಟಕ್ಕೆ ಚಾಲನೆ ನೀಡಿದರು.
ಸುಮಾರು 10 ಬಾಲ್ ಗಳನ್ನು ಎದುರಿಸಿದ ಸ್ವಾಮೀಜಿ ಯಾವುದೇ ಎಸೆತವನ್ನೂ ಬಿಡಲಿಲ್ಲ. ಎಲ್ಲ ಬಾಲ್ ಗಳನ್ನು ಲೆಗ್ ಸೈಡ್ ಬೌಂಡರಿಗಟ್ಟಿದರು. ಸ್ವಾಮೀಜಿ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಮೈದಾನದಲ್ಲಿ ನೆರೆದಿದ್ದ ಕ್ರಿಕೆಟ್ ಪ್ರೇಮಿಗಳ ಹುಬ್ಬೇರುವಂತೆ ಮಾಡಿದರು.
ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶ್ರೀಗಳು, ಪೂರ್ವಾಶ್ರಮದಲ್ಲಿ ಕಬಡ್ಡಿ, ಬ್ಯಾಡ್ಮಿಂಟನ್ ಆಡುತ್ತಿದ್ದೆ. ಕ್ರಿಕೆಟ್ ಬಗ್ಗೆ ಹೆಚ್ಚು ಒಲವಿಲ್ಲ. ಆದ್ರೆ ಕ್ರಿಕೆಟ್ ಆಟ ಗೊತ್ತಿಲ್ಲ ಎಂದೇನಲ್ಲ. ಟಿವಿಯನ್ನೇ ನೋಡಲ್ಲ. ಬಂದ ಬಾಲ್ ಗೆ ಬ್ಯಾಟಿನಿಂದ ಹೊಡೆದೆ ಎಂದು ಹೇಳಿದರು.
ಕ್ರೀಡಾಕೂಟದ ಟಾಸನ್ನ ಸ್ವಾಮೀಜಿಯವರು ಚಿಮ್ಮಿಸಿ ಎರಡು ದಿನಗಳ ಪಂದ್ಯಾಟಕ್ಕೆ ಚಾಲನೆ ನೀಡಿದರು.