ತಿರುಪತಿ: ತಮ್ಮ ಇಷ್ಟಕ್ಕೆ ವಿರುದ್ಧವಾಗಿ ಮದುವೆಯಾಗಿದ್ದಕ್ಕೆ ಯುವತಿಯ ಪೋಷಕರು ಯುವಕನ ಕಣ್ಣಿಗೆ ಖಾರದಪುಡಿ ಎರಚಿ ಮಗಳನ್ನು ಎಳೆದೊಯ್ದಿರುವ ಘಟನೆ ಸೋಮವಾರದಂದು ಚಿತ್ತೂರು ಜಿಲ್ಲೆಯ ತೋಂಡಿವಡ ಗ್ರಾಮದಲ್ಲಿ ನಡೆದಿದೆ.
ಚಂದ್ರಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಹೌಸ್ ಸರ್ಜನ್ ಆಗಿರೋ ನವೀನ್ ಕುಮಾರ್ ಹಾಗೂ ಮೆಡಿಕಲ್ ವಿದ್ಯಾರ್ಥಿನಿ ಶ್ರೀಚಂದನಾ ಸ್ನೇಹಿತರಾಗಿದ್ದರು. ನಂತರ ಸ್ನೇಹ ಪ್ರೀತಿಗೆ ತಿರುಗಿ, ಯುವತಿಯ ಪೋಷಕರ ಇಷ್ಟಕ್ಕೆ ವಿರುದ್ಧವಾಗಿ ಮದುವೆಯಾಗಿದ್ದರು. ಆಗಸ್ಟ್ 16 ಎಂದು ಇವರ ಮದುವೆ ನೆರವೇರಿತ್ತು. ಯುವಕ ಯುವತಿ ಇಬ್ಬರೂ ಬೇರೆ ಬೇರೆ ಜಾತಿಗೆ ಸೇರಿದವರಾಗಿದ್ದರಿಂದ ಯುವತಿಯ ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಸೋಮವಾರದಂದು ಶ್ರೀಚಂದನಾ ಪೋಷಕರು ಹಾಗೂ ಇತರೆ ಕೆಲವರು ವಾಹನಗಳಲ್ಲಿ ಬಂದು ಬೈಕ್ನಲ್ಲಿ ಹೋಗುತ್ತಿದ್ದ ನವೀನ್ ಮತ್ತು ಶ್ರಿಚಂದನಾರನ್ನ ತಡೆದಿದ್ದರು. ನಂತರ ನವೀನ್ ಕಣ್ಣಿಗೆ ಖಾರದ ಪುಡಿ ಎರಚಿ ಶ್ರೀಚಂದನಾರನ್ನ ಎಳೆದುಕೊಂಡು ಹೋಗಿದ್ದಾರೆ.
ನಂತರ ನವೀನ್ ಚಂದ್ರಗಿರಿ ಪೊಲೀಸ್ ಠಾಣೆಸಗೆ ಹೋಗಿ ಶ್ರೀಚಂದನಾ ತಂದೆ ರಾಜಭೂಪಾಲ್ ರೆಡ್ಡಿ ಹಾಗೂ ಇತರರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಹಿಂದೆಯೂ ದಾಳಿಯ ಯತ್ನ ನಡೆದಿದ್ದು, ತನ್ನನ್ನು ರಕ್ಷಿಸಿಕೊಳ್ಳಲು ತಿರುಪತಿ ಪೊಲೀಸರ ಸಹಾಯ ಪಡೆದಿದ್ದಾಗಿ ಹೇಳಿದ್ದಾರೆ.