ಜಾರ್ಖಂಡ್: ರೇಷನ್ ಕಾರ್ಡ್ಗೆ ಆಧಾರ್ ನಂಬರ್ ಲಿಂಕ್ ಮಾಡಿಸಿಲ್ಲ ಎಂದು ರೇಷನ್ ಕೊಡದ ಹಿನ್ನೆಲೆಯಲ್ಲಿ ಹಸಿವಿನಿಂದ 11 ವರ್ಷದ ಬಾಲಕಿ ಮೃತಪಟ್ಟಿರುವಂತಹ ಮನಕಲಕುವಂತಹ ಘಟನೆ ಜಾರ್ಖಂಡ್ನ ಕರಿಮತಿ ಗ್ರಾಮದಲ್ಲಿ ನಡೆದಿದೆ.
5 ದಿನಗಳವರೆಗೆ ಊಟ ಇಲ್ಲದೇ ಹಸಿವಿನಿಂದ ನರಳಾಡಿ ಸೆಪ್ಟಂಬರ್ 28 ರಂದು ಸಂತೋಷಿ ಕುಮಾರಿ (11) ಸಾವನ್ನಪ್ಪಿದ್ದಾಳೆ. ಸಂತೋಷಿ ಮಲೇರಿಯಾದಿಂದ ಸಾವನ್ನಪ್ಪಿದ್ದಾಳೆ ಎಂದು ಜಿಲ್ಲೆಯ ಅಧಿಕಾರಿಗಳು ವರದಿಯಲ್ಲಿ ತಿಳಿಸಿದ್ದಾರೆ. ಆದರೆ ಸಂತೋಷಿ ತಾಯಿ ಕೊಲ್ವಿ ದೇವಿ ನನ್ನ ಮಗಳು 4-5 ದಿನಗಳ ಕಾಲ ಹಸಿದುಕೊಂಡು ಅನ್ನ… ಅನ್ನ… ಎನ್ನುತ್ತಲೇ ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ರಾಘುಬಾರ್ ದಾಸ್ ಸಂತೋಷಿ ಸಾವಿನ ಪ್ರಕರಣವನ್ನು ತನಿಖೆ ಮಾಡುವಂತೆ ಆದೇಶಿಸಿದ್ದು, 24 ಗಂಟೆಯಲ್ಲಿ ನನಗೆ ವರದಿ ಕೊಡಬೇಕು. ಸಂತೋಷಿ ಕುಟುಂಬದವರ ರೇಷನ್ ಕಾರ್ಡ್ ರದ್ದುಗೊಳಿಸಿರುವ ಬಗ್ಗೆಯೂ ಮಾಹಿತಿ ಬೇಕು. ಇಂತಹ ಘಟನೆ ಮತ್ತೆ ನನ್ನ ಪ್ರದೇಶದಲ್ಲಿ ಮರುಕಳಿಸಬಾರದು ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ.
ಸಂತೋಷಿ ಕುಟುಂಬದವರು ಕಡು ಬಡವಾಗಿದ್ದು, ಸರ್ಕಾರದಿಂದ ಕೊಡುವ ಅಕ್ಕಿ, ಬೇಳೆಯಲ್ಲಿಯೇ ಜೀವನ ನಡೆಸುತ್ತಿದ್ದರು. ರೇಷನ್ ಕಾರ್ಡ್ಗೆ ಆಧಾರ್ ಲಿಂಕ್ ಮಾಡಿಸುವಂತೆ 3 ವಾರಗಳ ಗಡುವು ನೀಡಿ ಮಾರ್ಚ್ನಲ್ಲಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಆದ್ರೆ ಕೌಲ್ವಿ ಅವರ ಕುಟುಂಬ ಆಧಾರ್ ಲಿಂಕ್ ಮಾಡಿಸದ ಕಾರಣ ಅವರಿಗೆ ರೇಷನ್ ಕ್ಯಾನ್ಸಲ್ ಮಾಡಲಾಗಿತ್ತು.
ದಸರಾ ಹಬ್ಬದ ಪ್ರಯುಕ್ತ ಸೆಪ್ಟಂಬರ್ 20 ರಿಂದ ಶಾಲೆಗಳಿಗೆ ರಜೆ ನೀಡಿಲಾಗಿತ್ತು. ಆದ್ದರಿಂದ ಶಾಲೆಯಲ್ಲಿ ಸಿಗುತ್ತಿದ್ದ ಮಧ್ಯಾಹ್ನದ ಬಿಸಿ ಊಟವು ಕೂಡ ಬಾಲಕಿಗೆ ಇರಲಿಲ್ಲ. ಇದರಿಂದ ಸಂತೋಷಿ ಸೇರಿದಂತೆ ಅವರ ಮನೆಯವರು ಕೂಡ 4-5 ದಿನಗಳವರೆಗೂ ತಿನ್ನಲು ಅನ್ನ ಇಲ್ಲದೇ ಹಸಿದುಕೊಂಡಿದ್ದರು. ಆದರೆ ಸಂತೋಷಿ ಹಸಿವನ್ನು ತಾಳಲಾಗದೆ ಸೆ.28 ರಂದು ಮೃತಪಟ್ಟಿದ್ದಾಳೆ.
ಕರಿಮತಿ ಗ್ರಾಮದಲ್ಲಿ ಸುಮಾರು 700 ಮನೆಗಳಿದ್ದು, ಸಂತೋಷಿ ಕುಟುಂಬ ಸೇರಿದಂತೆ 10 ಕುಟುಂಬಗಳ ರೇಷನ್ ಕಾರ್ಡ್ಗಳನ್ನ ಸ್ಥಳಿಯ ಅಧಿಕಾರಿಯೊಬ್ಬರು ರದ್ದು ಮಾಡಿದ್ದಾರೆ.
ಘಟನೆ ನಡೆದ ಎರಡು ದಿನಗಳ ಬಳಿಕ ಹೋರಾಟಗಾರರಾದ ತಾರಾ ಮನಿ ಶಾ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ನಾನು ಸಂತೋಷಿ ಮೃತಪಟ್ಟ ಎರಡು ದಿನಗಳ ಬಳಿಕ ಆ ಗ್ರಾಮಕ್ಕೆ ಹೋಗಿದ್ದೆ. ಕುಟುಂಬಕ್ಕೆ ಆಹಾರ ಹಾಗೂ ನೆಲೆಸಲು ಸರಿಯಾದ ಮನೆಯಿಲ್ಲದಿರುವುದನ್ನು ನೋಡಿದೆ ಎಂದು ಹೇಳಿದ್ದಾರೆ.
ಕುಟುಂಬದ ಪಡಿತರ ರದ್ದು ಮಾಡುವುದು ಸುಪ್ರೀಂ ಕೋರ್ಟ್ನ ಆದೇಶಗಳ ಉಲ್ಲಂಘನೆಯಾಗುತ್ತದೆ. ಬಡ ಕುಟುಂಬಗಳ ಆಹಾರ ಸೌಲಭ್ಯಕ್ಕೆ ಆಧಾರ್ ನಂಬರ್ ಕಡ್ಡಾಯಗೊಳಿಸುವಂತಿಲ್ಲ ಎಂದು ಹೇಳಿದೆ ಎಂದು ಅವರು ತಿಳಿಸಿದ್ದಾರೆ.