ತುಮಕೂರು: ಸಿಎಂ ಸಿದ್ದರಾಮಯ್ಯ ಬೆಳ್ಳಿ ತಟ್ಟೆಯಲ್ಲಿ ಉಪಹಾರ ಸೇವಿಸಿದ ಘಟನೆ ಕುರಿತು ತುಮಕೂರು ಜಿಲ್ಲೆ ಮಧುಗಿರಿ ಶಾಸಕ ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಮುಂದಿನ ಬಾರಿ ಸಿದ್ದರಾಮಯ್ಯ ಮನೆಗೆ ಬಂದರೆ ಬೆಳ್ಳಿ ತಟ್ಟೆಯಲ್ಲಿ ಊಟ ನೀಡುತ್ತೇನೆ ಎಂದು ಹೇಳಿದ್ದಾರೆ.
ಗುಂಡುರಾವ್ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ನಮ್ಮ ಮನೆಗೆ ಭೇಟಿ ನೀಡಿದ್ದ ವೇಳೆ ಈ ಬೆಳ್ಳಿ ತಟ್ಟೆಯನ್ನು ಖರೀದಿ ಮಾಡಿದ್ದೆವು. ಆಗಿನಿಂದಲೂ ಇದೇ ಬೆಳ್ಳಿ ತಟ್ಟೆಯಲ್ಲಿ ಊಟ ಕೊಟ್ಟಿದ್ದೆ. ಅಲ್ಲದೇ ಮೊದಲ ಬಾರಿಗೆ ಸಿಎಂ ಅವರು ನಮ್ಮ ಮನೆಯಲ್ಲಿ ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿಲ್ಲ. ಈ ಹಿಂದೆ ಅವರು ನಮ್ಮ ಮನೆಗೆ ಬಂದ ವೇಳೆಯಲ್ಲೂ ಇದೇ ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿದ್ದಾರೆ. ನಮ್ಮ ಮನೆಗೆ ಬರುವ ಅತಿಥಿಗಳಿಗೆ ನಾವು ಸತ್ಕಾರ ಮಾಡುವುದು ನಮ್ಮ ಸಾಂಪ್ರದಾಯ ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಸಮಾಜವಾದಿ ಹಿನ್ನೆಲೆಯಿಂದ ಬಂದವರು ಎಂಬ ಕಾರಣಕ್ಕೆ, ಈಗಲೂ ಪಂಚೆಯನ್ನೇ ಧರಿಸಬೇಕಾ. ಕಾಲ ಬದಲಾದಂತೆ ಮನುಷ್ಯರೂ ಬದಲಾಗಬೇಕು. ಸಮಾಜವಾದಿ ಹಿನ್ನೆಲೆ ಉಳ್ಳವರು ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಬಾರದು ಅನ್ನುವುದು ಮೂರ್ಖರ ಪ್ರಶ್ನೆ. ಮನೆಗೆ ಬಂದ ಅತಿಥಿಗಳು ನಾವು ನೀಡುವ ಆಹಾರವನ್ನು ತಿನ್ನುವುದು ಸಾಂಪ್ರದಾಯ. ಅದನ್ನು ಬಿಟ್ಟು ನನಗೆ ಇದೇ ಊಟ ಬೇಕು ಎಂದು ಕೇಳಲು ಆಗುತ್ತಾ. ಮುಂದಿನ ಬಾರಿ ಸಿಎಂ ಮನೆಗೆ ಬಂದಾಗ ಚಿನ್ನದ ತಟ್ಟೆಯಲ್ಲಿ ಊಟ ಕೊಡುತ್ತೇನೆ. ಜನವರಿ 4 ರಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ಕೆ ಸಿ ವೇಣುಗೋಪಾಲ ಅವರು ನಮ್ಮ ಮನೆಗೆ ಬರುತ್ತಾರೆ. ಅವರಿಗೂ ಬೆಳ್ಳಿ ತಟ್ಟೆಯಲ್ಲೇ ಊಟ ನೀಡುತ್ತೇನೆ ಎಂದರು.
ಗುರುವಾರ ತುಮಕೂರು ಜಿಲ್ಲೆಯಲ್ಲಿ ಏರ್ಪಡಿಸಲಾಗಿದ್ದ ಸರ್ಕಾರದ ಸಾಧನಾ ಸಮಾವೇಶದಲ್ಲಿ ಭಾಗವಹಿಸಲು ಸಿಎಂ ಸಿದ್ದರಾಮಯ್ಯ ಶಿರಾಗೆ ಆಗಮಿಸಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಭಾವಹಿಸುವ ಮುನ್ನ ಕ್ಯಾತಸಂದ್ರದಲ್ಲಿರುವ ಮಧುಗಿರಿಯ ಶಾಸಕ ಕೆ.ಎನ್ ರಾಜಣ್ಣ ಅವರ ಮನೆಯಲ್ಲಿ ಬೆಳ್ಳಿ ತಟ್ಟೆ, ಲೋಟದಲ್ಲಿ ಉಪಹಾರ ಸೇವನೆ ಮಾಡಿದ್ದರು. ಸಿಎಂ ಸಿದ್ದರಾಮಯ್ಯ ಅವರು ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿದ್ದು ಹಲವರ ಟೀಕೆಗೆ ಗುರಿಯಾಗಿತ್ತು.
https://www.youtube.com/watch?v=gszg55IJ6cE