ಧಾರವಾಡ: ಜನಮೆಚ್ಚಿದ ನಾಯಕರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ರಾಜ್ಯದ ಯಾವ ಕ್ಷೇತ್ರದಲ್ಲಿ ಚುನಾವಣೆಗೆ ನಿಂತರೂ ಅವರು ಗೆದ್ದೇ ಗೆಲ್ಲುತ್ತಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಸಿದ್ದರಾಮಯ್ಯನವರು ನನ್ನ ಕ್ಷೇತ್ರಕ್ಕೆ ಬರುತ್ತೇನೆ ಎಂದು ಹೇಳಿದರೆ ನಾನು ಕ್ಷೇತ್ರ ಬಿಟ್ಟು ಕೊಡಲು ಸಿದ್ಧ ಎಂದರು.
ನಮ್ಮ ಸಿಎಂ ಪ್ರಚಾರ ಪ್ರಿಯರಲ್ಲ, ಕೆಲಸ ಮಾಡೋದ್ರಲ್ಲಿ ಮುಂದೆ ಇರುತ್ತಾರೆ. ಟೈಟಲ್ ಕೊಡೋದ್ರಲ್ಲಿ ಬಿಜೆಪಿಯವರು ಮಹಾ ನಿಸ್ಸಿಮರು. ಕಾಂಗ್ರೆಸ್ ಬಗ್ಗೆ ನೆಗೆಟಿವ್ ಮಾತಾಡೋದು ಬಿಟ್ರೆ ಕಳೆದ ಮೂರು ವರ್ಷಗಳಲ್ಲಿ ಹೇಳಿಕೊಳ್ಳುವಂತಹ ಒಂದೇ ಯೋಜನೆ ಕೊಟ್ಟಿಲ್ಲ. ಹವಾ ಕ್ರಿಯೆಟ್ ಮಾಡೋದು, ಮಿಷನ್ಗಳ ಹೆಸರಿನಲ್ಲಿ ಜನರನ್ನು ಮರಳು ಮಾಡೋದ್ರಲ್ಲಿ ಅವರು ಸದಾ ಮುಂದೆ ಇರ್ತಾರೆ ಎಂದು ಪ್ರಧಾನಿ ಮೋದಿ ವಿರುದ್ಧ ಲಾಡ್ ಹರಿಹಾಯ್ದರು.
ಜನರನ್ನು ಒಂದು ಸಲ ಮೂರ್ಖರನ್ನಾಗಿ ಮಾಡಿದ್ದು ಮತ್ತೊಮ್ಮೆ ಮೂರ್ಖರನ್ನು ಮಾಡಲು ಆಗುವುದಿಲ್ಲ. ಈ ಸಲ ರಾಜ್ಯದಲ್ಲಿ ಮೋದಿ ಹವಾ ನಡೆಯೋದಿಲ್ಲ. 162 ಪ್ರತಿಪಕ್ಷಗಳ ಮುಖಂಡರ ಫೋನ್ ಟ್ಯಾಪ್ ಕದ್ದಾಲಿಕೆ ವಿಷಯ ನಂಗೆ ಮಾಹಿತಿ ಇಲ್ಲ. ಆ ಬಗ್ಗೆ ಪ್ರತಿಕ್ರಿಯೆ ನೀಡಲಾರೆ ಎಂದು ಹೇಳಿದರು.