ಶಿವಮೊಗ್ಗ: ಹೆಲಿಕಾಪ್ಟರ್ ಹತ್ತುವಾಗ ಇಲ್ಲದ ನೀತಿ ಸಂಹಿತೆ ಇಳಿಯುಷ್ಟರಲ್ಲಿಯೇ ಜಾರಿಯಾಗಿದ್ದರಿಂದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕೆಲ ಕಾಲ ಸಂಕಷ್ಟಕ್ಕೆ ಸಿಲುಕಿದ ಘಟನೆ ಇಂದು ನಡೆಯಿತು.
ಜಕ್ಕೂರು ವಿಮಾನ ನಿಲ್ದಾಣದಿಂದ ಸಚಿವರು ಶಿವಮೊಗ್ಗದಲ್ಲಿ ನಿಗದಿಯಾಗಿ ಮೆಸ್ಕಾ ಅಧಿಕಾರಿಗಳ ಸಭೆಯಲ್ಲಿ ಭಾಗಿಯಾಗಲು ಪ್ರಯಾಣ ಬೆಳೆಸಿದ್ದರು. ಸಚಿವರನ್ನು ಕರೆದೊಯ್ಯಲು ಶಿವಮೊಗ್ಗ ಹೆಲಿಪ್ಯಾಡ್ ಗೆ ಬಂದಿದ್ದ ಸರ್ಕಾರಿ ವಾಹನವನ್ನು ಜಿಲ್ಲಾಡಳಿತ ಹಿಂದೆ ಪಡೆದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಖಾಸಗಿ ಕಾರ್ ವ್ಯವಸ್ಥೆ ಮಾಡಿದ್ದರು.
ಮಧ್ಯಾಹ್ನ 12.40ಕ್ಕೆ ಶಿವಮೊಗ್ಗ ಹೆಲಿಪ್ಯಾಡ್ಗೆ ಬಂದ ಸಚಿವರು ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ಮಾತನಾಡಿ, ಹೌದು ನಾನು ಕಾಪ್ಟರ್ ಹತ್ತುವಾಗ ಯಾವುದೇ ನೀತಿ ಸಂಹಿತೆ ಜಾರಿಯಾಗಿರಲಿಲ್ಲ. ಆದ್ರೆ ಮಾರ್ಗ ಮಧ್ಯೆ ನೀತಿ ಸಂಹಿತೆ ಜಾರಿಯಾಗಿರುವುದು ಗೊತ್ತಾಯಿತು. ಹಾಗಾಗಿ ಹೆಲಿಪ್ಯಾಡ್ ನಿಂದ ಖಾಸಗಿ ವಾಹನದಲ್ಲಿಯೇ ತೆರಳುತ್ತಿದ್ದೇನೆ ಅಂತಾ ಹೇಳಿದ್ರು.