ವಿಜಯಪುರ: ದಿನ ಬೆಳಗಾದ್ರೆ ಸಾಕು ಜಾತಿ ಜಗಳ, ಧರ್ಮ ಕಲಹ ಮತ್ತು ಕೋಮು ಗಲಭೆಗಳ ಸುದ್ದಿಗಳನ್ನೇ ಕೇಳುತ್ತೀವಿ. ಇನ್ನೂ ಕೆಲವರು ದೇವರ ಹೆಸರಲ್ಲೂ ಮತಾಂಧತೆಯನ್ನು ಮೆರೆಯುತ್ತಾರೆ. ಆದರೆ ವಿಜಯಪುರದ ಓರ್ವ ವ್ಯಕ್ತಿ ಆಂಜನೇಯ ಪೂಜೆ ಮಾಡಿ ಅಂತಹವರಿಗೆ ಮಾದರಿಯಾಗಿದ್ದಾರೆ.
ಜಿಲ್ಲೆಯ ಡೊಮ್ಮನಾಲದ ಮೆಹಬೂಬ್ ಸಾಬ್ ನದಾಫ್ ಎಂಬುವರು ಮುಸ್ಲಿಂ ಆದರೂ ಅಪ್ಪಟ ಆಂಜನೇಯನ ಭಕ್ತರಾಗಿದ್ದಾರೆ. ನಾನು ಪ್ರತಿದಿನ ಬೆಳಗ್ಗೆ ಎದ್ದು ಗ್ರಾಮದಲ್ಲಿರುವ ದೇಗುಲಕ್ಕೆ ಹೋಗಿ ಸ್ವತಃ ನಾನೇ ಆಂಜನೇಯನ ಮೂರ್ತಿ ತೊಳೆದು, ತಿಲಕ ಇಟ್ಟು, ಮಾಲೆ ಹಾಕಿ ಪೂಜೆ ಮಾಡುತ್ತೇನೆ. ಸುಮಾರು 25 ವರ್ಷಗಳಿಂದ ಇದನ್ನು ಅನುಸರಿಸಿಕೊಂಡು ಬರುತ್ತಿದ್ದೇನೆ ಎಂದು ಆಂಜನೇಯ ಭಕ್ತ ಮೆಹಬೂಬ್ ಸಾಬ್ ಹೇಳಿದ್ದಾರೆ.
ಪ್ರತಿನಿತ್ಯ ಹನುಮನ ಪೂಜೆಗೆ ಮೆಹಬೂಬ್ ಮನೆಯವರೇ ಎಲ್ಲಾ ಸಿದ್ಧತೆ ಮಾಡುತ್ತಾರೆ. ಮೆಹಬೂಬ್ ಪೂಜೆಗೆ ಹೊರಟು ನಿಂತರೆ ಸಾಕು ಅವರ ಮೊಮ್ಮಕ್ಕಳು ಕೂಡ ಓಡೋಡಿ ಬರುತ್ತಾರೆ. ಮನೆಯಲ್ಲೂ ಕೂಡ ಹಿಂದೂ ದೇವರ ಚಿತ್ರವಿದೆ. ಇದರಿಂದ ಅವರ ವ್ಯಕ್ತಿತ್ವ ಗ್ರಾಮಸ್ಥರಿಗೆ ತುಂಬಾ ಇಷ್ಟವಾಗಿದೆ ಎಂದು ಸ್ಥಳೀಯ ಸುರೇಶ ಹೇಳಿದ್ದಾರೆ.
ಸಮಾಜದಲ್ಲಿ ಯಾವುದೇ ಬೇಧ-ಭಾವವಿಲ್ಲದೇ ಮೆಹಬೂಬ್ ಸಾಬ್ ಎಲ್ಲಾ ದೇವರನ್ನು ಭಕ್ತಿಯಿಂದ ಪೂಜಿಸುತ್ತಾರೆ.