ಲಕ್ನೋ: ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಲು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೂಚಿಸಿರೋ ಬೆನ್ನಲ್ಲೇ ಲಕ್ನೋ, ಅಲಹಾಬಾದ್ ಸೇರಿದಂತೆ ಉತ್ತರಪ್ರದೇಶದ ಹಲವು ಭಾಗಗಳಲ್ಲಿ ಮಾಂಸ ವ್ಯಾಪಾರಿಗಳು ಸರ್ಕಾರದ ವಿರುದ್ಧ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ಇಂದಿನಿಂದ ನಮ್ಮ ಮುಷ್ಕರವನ್ನು ತೀವ್ರಗೊಳಿಸಲು ನಿರ್ಧರಿಸಿದ್ದೇವೆ. ಎಲ್ಲಾ ಅಂಗಡಿಗಳು ಬಂದ್ ಆಗಲಿವೆ. ಮೀನು ವ್ಯಾಪಾರಿಗಳು ಕೂಡ ನಮಗೆ ಬಂಬಲ ನೀಡಿದ್ದಾರೆ. ಕಸಾಯಿಖಾನೆಗಳನ್ನ ಮುಚ್ಚಿಸುತ್ತಿರೋದ್ರಿಂದ ಲಕ್ಷಾಂತರ ಮಂದಿ ಜೀವನಾಧಾರ ಕಳೆದುಕೊಂಡಿದ್ದಾರೆಂದು ಲಕ್ನೋದ ಕುರಿ ಹಾಗೂ ಮೇಕೆ ವ್ಯಾಪಾರ ಮಂಡಳಿ ಮುಖ್ಯಸ್ಥ ಮುಬೀನ್ ಖುರೇಷಿ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.
ತಮ್ಮ ಬಳಿ ಲೈಸೆನ್ಸ್ ಇದ್ದರೂ ಕೂಡ ಪೊಲೀಸರು ದಾಳಿ ನಡೆಸುತ್ತಿದ್ದಾರೆ ಎಂದು ಇಲ್ಲಿನ ಕೆಲವು ಮಾಂಸ ವ್ಯಾಪಾರಿಗಳು ಆರೋಪಿಸಿದ್ದಾರೆ. ಅಲ್ಲದೆ ಸರಬರಾಜು ಕಡಿಮೆಯಾಗಿರೋಗ್ರಿಂದ ಅಂಗಡಿ ಮುಚ್ಚುವ ಸ್ಥಿತಿಗೆ ಬಂದಿದ್ದೇವೆ ಎಂದು ಹೇಳಿದ್ದಾರೆ.
ಇನ್ನು ಸಿಎಂ ಹೊರಡಿಸಿರುವ ಈ ಆದೇಶದಿಂದ ನೊಯ್ಡಾದ ಕಸಾಯಿಖಾನೆಯವರು ನಮ್ಮ ಅದಾಯ ಆರ್ಧದಷ್ಟು ಕುಸಿದಿದೆ ಎಂದಿದ್ದಾರೆ. ಅಧಿಕಾರಿಗಳು ಕೋಳಿ ಅಂಗಡಿಗಳನ್ನು ಕೂಡ ಮುಚ್ಚಿಸುತ್ತಿದ್ದಾರೆ ಎಂದು ಅಂಗಡಿ ಮಾಲೀಕರಬ್ಬರು ಆರೋಪಿಸಿದ್ದಾರೆ. ಅಗತ್ಯ ದಾಖಲೆಗಳನ್ನ ನೀಡಿದ್ರೂ ಪರದೆ ಅಥವಾ ಕರ್ಟನ್ ಹಾಕುವಂತೆ ಹೇಳ್ತಿದ್ದಾರೆ ಅಂತ ಆರೋಪಿಸಿದ್ದಾರೆ.
ಈ ಬಗ್ಗೆ ಪೊಲೀಸರು ಪ್ರತಿಕ್ರಿಯೆ ನೀಡಿದ್ದು, ನಾವು ನಮ್ಮ ಕರ್ತವ್ಯ ಮಾಡುತ್ತಿದ್ದೇವೆ. ದಾಖಲೆಗಳನ್ನ ಪರಿಶೀಲಿಸುವುದು ಪೊಲೀಸರ ಜವಾಬ್ದಾರಿ. ಕೆಲವರು ಲೈಸೆನ್ಸ್ ನವೀಕರಿಸದ ಕಾರಣ ತಾವಾಗೇ ಅಂಗಡಿಗಳನ್ನ ಮುಚ್ಚುತ್ತಿದ್ದಾರೆ ಎಂದು ಹೇಳಿದ್ದಾರೆ.
ಆದ್ರೆ ಅಕ್ರಮ ಕಸಾಯಿಖಾನೆಗಳನ್ನು ಮಾತ್ರ ಮುಚ್ಚಲು ಆದೇಶ ನೀಡಲಾಗಿದ್ದು, ಕಾನೂನುಬದ್ಧವಾಗಿರುವ ಕಸಾಯಿಖಾನೆಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಆದಿತ್ಯನಾಥ್ ಸ್ಪಷ್ಟಪಡಿಸಿದ್ದಾರೆ.