ಮಂಗಳೂರು: ಬೆಂಗಳೂರು ವಿಚಾರ ಇಟ್ಟುಕೊಂಡು ಕಾಂಗ್ರೆಸ್ ಮೇಲೆ ಆರೋಪ ಮಾಡುವ ಬರದಲ್ಲಿ ಎಡವಟ್ಟು ಮಾಡಿಕೊಂಡಿದ್ದ ಬಿಜೆಪಿ, ಇದೀಗ ಹಿಂದೂ ಕಾರ್ಯಕರ್ತರ ಹತ್ಯೆಯ ವಿಚಾರದಲ್ಲಿ ಮತ್ತೊಮ್ಮೆ ಎಡವಟ್ಟು ಮಾಡಿಕೊಳ್ಳುವ ಮೂಲಕ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದಲ್ಲಿ 23 ಹಿಂದೂ ಕಾರ್ಯಕರ್ತರ ಹತ್ಯೆ ನಡೆದಿದೆ ಎಂದು ಬಿಜೆಪಿ ನಾಯಕರು ಹೇಳಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಆದರೆ ಮಾರ್ಚ್ 6 ರಂದು ಮಂಗಳೂರಿನಲ್ಲಿ ನಡೆಯಲಿರುವ `ಮಂಗಳೂರು ಚಲೋ’ ಕಾರ್ಯಕ್ರಮದ ಮುದ್ರಿತ ಕರಪತ್ರದಲ್ಲಿ ಕೇವಲ 16 ಮಂದಿಯ ಭಾವಚಿತ್ರ ಸಹಿತ ವಿವರ ನೀಡಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಬಿಜೆಪಿಯ ಚಾರ್ಜ್ ಶೀಟ್ ನಲ್ಲಿ ಲೋಪ: ವೈರಲ್ ಆಯ್ತು ಎಡವಟ್ಟು
ಮಾರ್ಚ್ 6 ಮಂಗಳೂರು ಚಲೋ ದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡಾ ಭಾಗವಹಿಸಲಿದ್ದಾರೆ. ಈ ಹಿಂದೆ 23 ಕಾರ್ಯಕರ್ತರ ಪಟ್ಟಿ ಮಾಡಿದ್ದ ಹಾಗೂ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದ ಬಿಜೆಪಿಯು ಈಗ ಏಕಾಏಕಿ 7 ಮಂದಿಯನ್ನು ಕೈಬಿಟ್ಟಿದ್ದು ಯಾಕೆ ಎನ್ನುವುದು ಕೂಡಾ ವಿವಾದಕ್ಕೆ ಕಾರಣವಾಗಿದೆ.