ಮಂಡ್ಯ: ದಿನನಿತ್ಯ ಕಾನೂನು ಸುವ್ಯವಸ್ಥೆ ಕಾಪಾಡಲು ಕೆಲಸದ ಒತ್ತಡದಲ್ಲಿರುತ್ತಿದ್ದ ಪೊಲೀಸ್ ಅಧಿಕಾರಿಗಳು ಇಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕರಿಘಟ್ಟ ಬೆಟ್ಟದಲ್ಲಿ ಟ್ರಕ್ಕಿಂಗ್ ಮಾಡಿ ಎಂಜಾಯ್ ಮಾಡಿದ್ದಾರೆ.
ಬೆಳ್ಳಂಬೆಳಗ್ಗೆ ಮಂಡ್ಯ ಜಿಲ್ಲಾ ಎಸ್ಪಿ ರಾಧಿಕಾ ಅವರ ನೇತೃತ್ವದಲ್ಲಿ ಕರಿಘಟ್ಟದ ಬಳಿ ಆಗಮಿಸಿದ ಅಡಿಷನಲ್ ಎಸ್ಪಿ, ಡಿವೈಎಸ್ಪಿ, ಸರ್ಕಲ್ ಇನ್ಸ್ಪೆಕ್ಟರ್, ಎಸ್ಐ ಸೇರಿದಂತೆ ನೂರಕ್ಕೂ ಹೆಚ್ಚು ಪೊಲೀಸರು ಖುಷಿಯಿಂದ ಬೆಟ್ಟ ಹತ್ತಲಾರಂಭಿಸಿದ್ದರು. ಬೆಟ್ಟದ ಮೇಲಿರುವ ಗಿಡಮರಗಳ ನಡುವೆ ಕಡಿದಾದ ಪ್ರದೇಶದಲ್ಲಿ ಸಾಗುತ್ತ ಬೆಟ್ಟದ ತುದಿ ತಲುಪಿದರು.
ನಂತರ ಬೆಟ್ಟದ ತುದಿಯಲ್ಲಿ ಕಲ್ಲು ಬಂಡೆ ಮೇಲೆ ಕುಳಿತು ಜೈಕಾರ ಕೂಗಿ ಖುಷಿ ಪಟ್ರು. ಅಲ್ಲಿಂದ ನೇರವಾಗಿ ಬೆಟ್ಟದ ಮೇಲಿರುವ ಶ್ರೀನಿವಾಸ ದೇವಸ್ಥಾನದ ಮುಂಭಾಗಕ್ಕೆ ತೆರಳಿ ಯೋಗ ಮಾಡಿದರು. ಕೆಲಸದ ಒತ್ತಡದಲ್ಲೇ ದಿನ ಕಳೆಯುವ ಪೊಲೀಸರಿಗೆ ಅಪರೂಪಕ್ಕೆ ಟ್ರಕ್ಕಿಂಗ್, ಯೋಗದ ವ್ಯವಸ್ಥೆ ಮಾಡಿದ್ರೆ ಅವರ ಮಾನಸಿಕ, ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ. ದೇಹ ಕೂಡ ಸದೃಢವಾಗಿರುತ್ತೆ. ಈ ರೀತಿಯ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲ ಪೊಲೀಸರಿಗೂ ಮುಂದಿನ ದಿನಗಳಲ್ಲಿ ಆಯೋಜನೆ ಮಾಡೋದಾಗಿ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಾಧಿಕಾ ತಿಳಿಸಿದ್ರು.