ಚಿಕ್ಕಬಳ್ಳಾಪುರ: ಕ್ಷೇತ್ರದ ಶಾಸಕ ಡಾ ಕೆ ಸುಧಾಕರ್ ಕಡೆಯಿಂದ ವಿತರಣೆ ಮಾಡಲಾಗಿದ್ದ ಸೀರೆಗೆ ಮತದಾರರೊಬ್ಬರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿರೋ ವಿಡಿಯೋ ಸಾಮಾಜಿಕ ಜಾತಾಣಗಳಲ್ಲಿ ವೈರಲ್ ಆಗಿದೆ.
ಶಾಸಕ ಡಾ ಕೆ ಸುಧಾಕರ್ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಕ್ಷೇತ್ರದ ಮನೆ-ಮನೆಗೆ ತೆರಳಿ ಮಹಿಳಾ ಮತದಾರರಿಗೆ ಸೀರೆ ವಿತರಣೆ ಮಾಡುತ್ತಿದ್ದಾರೆ. ಸಂಕ್ರಾಂತಿ ಸುಗ್ಗಿ ಕಾರ್ಯಕ್ರಮದ ನೆಪದಲ್ಲಿ ಮಹಿಳಾ ಮತದಾರರ ಮನವೊಲಿಕೆಗೆ ಶಾಸಕ ಸುಧಾಕರ್ ಮುಂದಾಗಿದ್ದಾರೆ.
ಇದೀಗ ಶಾಸಕ ಸುಧಾಕರ್ ಕಡೆಯಿಂದ ವಿತರಣೆ ಮಾಡಲಾಗಿದ್ದ ಸೀರೆಯನ್ನ ನಡು ರಸ್ತೆಯಲ್ಲಿ ಹಾಕಿ, ಬೆಂಕಿ ಹಚ್ಚಿದ ವ್ಯಕ್ತಿಯೊರ್ವ ಇಷ್ಟು ವರ್ಷಗಳ ಕಾಲ ಸೀರೆ ವಿತರಣೆ ಮಾಡದ ನೀವು ಈಗ ಚುನಾವಣಾ ಸಮಯದಲ್ಲಿ ಯಾಕೆ ಸೀರೆ ವಿತರಣೆ ಮಾಡುತ್ತಿದ್ದೀರಿ ಅಂತ ಶಾಸಕ ಸುಧಾಕರ್ ಗೆ ಪ್ರಶ್ನೆ ಮಾಡಿದ್ದಾರೆ.
ಈ ಬಾರಿಯ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಶಾಸಕ ಸುಧಾಕರ್ ತಮ್ಮ ಒಡೆತನದ ಸಾಯಿಕೃಷ್ಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕ್ಷೇತ್ರಾದ್ಯಂತ ಮಹಿಳಾ ಮತದಾರರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಿದ್ದರು. ರಂಗೋಲಿ ಸ್ಫರ್ಧೆಯಲ್ಲಿ ವಿಜೇತರಾದವರಿಗೆ ಹಾಗೂ ಭಾಗವಹಿಸಿದವರಿಗೆ ಬಹುಮಾನ ನೀಡಲು ಇದೇ ತಿಂಗಳ 24 ರಂದು ಬೃಹತ್ ಸಂಕ್ರಾಂತಿ ಸುಗ್ಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಆಹ್ವಾನ ಮಾಡುವ ನೆಪದಲ್ಲಿ ಸೀರೆ ಹಂಚಲಾಗುತ್ತಿದೆ ಎಂಬುದಾಗಿ ತಿಳಿದುಬಂದಿದೆ.