ಬೆಂಗಳೂರು: ಮಂಗಳವಾರ ನಡೆದ ಕೋರ್ ಕಮಿಟಿ ಸಭೆಯಲ್ಲಿ ಮಹದಾಯಿ ವಿಚಾರ ಮತ್ತು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ವಿವಾದಾತ್ಮಕ ಭಾಷಣದ ಕುರಿತು ಬಿಜೆಪಿ ನಾಯಕರು ಚರ್ಚೆ ನಡೆಸಿದ್ದಾರೆ.
ಮಹದಾಯಿ ವಿಚಾರದಲ್ಲಿ ಬಿಜೆಪಿ ನಿಲುವು ಸ್ಪಷ್ಟವಾಗಿದ್ದು, ನಾವು ನಮ್ಮ ಪಕ್ಷದ ನಾಯಕರನ್ನು ಒಪ್ಪಿಸಿದ್ದೇವೆ. ಕಾಂಗ್ರೆಸ್ ನವರು ಅವರ ಪಕ್ಷದವರನ್ನು ಒಪ್ಪಿಸಬೇಕು. ಇದೇ ವಾದವನ್ನು ನಾವು ಎಲ್ಲ ಕಡೆ ಮುಂದಿಡಬೇಕು ಎನ್ನುವ ನಿರ್ಧಾರಕ್ಕೆ ನಾಯಕರು ಬಂದಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ. ಇದನ್ನೂ ಓದಿ: ಅನಂತಕುಮಾರ್ ಹೆಗ್ಡೆ ನಾಲಿಗೆ ಕಡಿದು ತಂದವರಿಗೆ 1 ಕೋಟಿ ರೂ. ಬಹುಮಾನ: ಮಾಜಿ ಜಿ.ಪಂ. ಸದಸ್ಯ
ಜನವರಿ 6 ರಿಂದ ಗೋವಾದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಲು ಮುಂದಾಗುತ್ತಿದೆ. ಇದೇ ವಿಚಾರವನ್ನು ನಾವು ಹೋರಾಟಗಾರರಿಗೆ ಮನವರಿಕೆ ಮಾಡಿಕೊಡಬೇಕು. ಈ ವಿಚಾರವನ್ನು ಇಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.
ಹೆಗ್ಡೆ ವಿರುದ್ಧ ಅಸಮಾಧಾನ:
ಅನಂತ್ ಕುಮಾರ್ ಹೆಗ್ಡೆ ಹೇಳಿಕೆ ಕುರಿತಂತೆ ನಡೆದ ಚರ್ಚೆಯ ವೇಳೆ ಉದಾಸಿ, ಕಾರಜೋಳ ಕೆಲ ಹಿರಿಯ ನಾಯಕರು ಅಸಮಾಧಾನವನ್ನು ವ್ಯಕ್ತಪಡಿಸಿದರು. ಆಗ ಜಾವಡೇಕರ್ ಕೂಡ ಮಾಹಿತಿ ಪಡೆದು ಗಂಭೀರ ಚರ್ಚೆ ನಡೆಸಿದ್ದಾರೆ. ಅನಂತಕುಮಾರ್ ಹೆಗ್ಡೆ ಭಾವನಾತ್ಮಕ ಹೆಸರಲ್ಲಿ ವಿವಾದಾತ್ಮಕವಾಗಿ ಹೇಳಿಕೆಗಳನ್ನು ಕೊಡಬಾರದು. ಇದಕ್ಕೆ ಬ್ರೇಕ್ ಹಾಕಲೇಬೇಕು ಎಂದು ಕೋರ್ ಕಮಿಟಿ ಸಭೆಯಲ್ಲಿ ಒತ್ತಾಯ ಕೇಳಿಬಂದಿದೆ. ಸಭೆಯಲ್ಲಿ ಅನಂತಕುಮಾರ್ ಹೆಗ್ಡೆ ಬಾಯಿಗೆ ಬೀಗ ಹಾಕಿಸುತ್ತೇವೆ. ಯಾರ ಹತ್ತಿರ ಹೇಳಿಸಬೇಕು ಅವರ ಹತ್ತಿರವೇ ಹೇಳಿಸುತ್ತೇವೆ ಎಂದು ಬಿಎಸ್ವೈ ಹೇಳಿದ್ದಾರೆ. ಕೊನೆಗೆ ಜಾವಡೇಕರ್ ಸಮ್ಮತಿ ಸೂಚಿಸಿದ್ದು, ವಿವಾದಾತ್ಮಕ ಭಾಷಣಕ್ಕೆ ಬ್ರೇಕ್ ಹಾಕುವುದಾಗಿ ಭರವಸೆ ನೀಡಿದ್ದಾರೆ.