ಗದಗ: ಕಳಸಾ ಬಂಡೂರಿ, ಮಹದಾಯಿ ನೀರಿಗಾಗಿ ರೈತರ ಹೋರಾಟ 2 ವರ್ಷ ಪೂರೈಸಿದ ಹಿನ್ನಲೆ ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ “ಮಾಡು ಇಲ್ಲವೇ ಮಡಿ” ಹೋರಾಟ ಆರಂಭವಾಗಿದೆ.
ಹೋರಾಟ ಸಮಿತಿ ಅಧ್ಯಕ್ಷ ವೀರೇಶ ಸೊಬರದಮಠ ಅವರು ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ. ಉಪವಾಸ ಸತ್ಯಾಗ್ರಹವನ್ನು ಹಿಂಪಡೆದುಕೊಳ್ಳುವಂತೆ ನರಗುಂದ ತಾಲೂಕ ಅಧಿಕಾರಿಗಳಾದ ತಹಶೀಲ್ದಾರ್, ಪುರಸಭೆ ಮುಖ್ಯಾಧಿಕಾರಿ, ಡಿ.ವೈ.ಎಸ್.ಪಿ, ಸಿಪಿಐ ಸೇರಿದಂತೆ ಅನೇಕ ಅಧಿಕಾರಿಗಳು ರಾತ್ರಿ ವೇಳೆ ಹೋರಾಟ ವೇದಿಕೆ ಬಳಿ ಆಗಮಿಸಿ ಮನವೊಲಿಸಿ ಮನವಿ ಮಾಡಿಕೊಂಡ್ರು. ಆದ್ರೆ ಇದಕ್ಕೆ ರೈತ ಹೋರಾಟ ಮುಖಂಡ ವಿರೇಶ್ ಸೊಬರದಮಠ ಹಿಂದೆ ಸರಿಯಲಿಲ್ಲ.
ಹೋರಾಟ ಯಶಸ್ವಿಯಾಗೊವರೆಗೂ ಉಪವಾಸ ಸತ್ಯಾಗ್ರಹ ಮಾಡಲು ತಿರ್ಮಾನ ತೆಗೆದುಕೊಂಡಿದ್ದೆನೆ. ಕಠಿಣ ನಿರ್ಧಾರ ಮೂಲಕ ರಾಜ್ಯ, ಕೇಂದ್ರ ಸರ್ಕಾರಗಳಿಗೆ ಎಚ್ಚರಿಕೆ ಮಾಡ್ತೆನೆ. ಪ್ರಾಣ ಹೊದ್ರೂ ಚಿಂತೆ ಇಲ್ಲ ಉಪವಾಸ ಹಿಂಪಡೆಯುವುದಿಲ್ಲ. ಯೋಜನೆ ಇತ್ಯರ್ಥವಾಗಲಿ, ಇಲ್ಲವೇ ಪ್ರಾಣ ಹೋಗಲಿ ಎಂದು ಹೋರಾಟದ ಮುಖಂಡ ಸೊಬರದಮಠ ಹೇಳಿದರು.
ಹೋರಾಟ ಮುಖಂಡರ ದೃಢ ನಿರ್ಧಾರದಿಂದ ಅಲ್ಲಿ ನೆರೆದಿದ್ದ ಅನೇಕ ಹೋರಾಟಗಾರರು ಕಣ್ಣಿರಿಟ್ಟರು. ಉಪವಾಸ ಕೈ ಬಿಡುವಂತೆ ಅವರೂ ಮನವೊಲಿಸಿದ್ರೂ ಸೊಬರದಮಠ ಉಪವಾಸದಿಂದ ಹಿಂದೆ ಸರಿಯದೆ ಹಠಹಿಡಿದು ಕುಳಿತಿದ್ದಾರೆ.
ಆರೋಗ್ಯದಲ್ಲಿ ವ್ಯಥೆಯುಂಟಾದ್ರೆ ನೋಡಿಕೊಳ್ಳಲು ಆರೋಗ್ಯ ಅಧಿಕಾರಿ ಹಾಗೂ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಒಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸೇರಿಕೊಂಡು ನೀರು ಕೊಟ್ಟು ಜನ್ರ ಪ್ರಾಣ ಉಳಿಸುತ್ತಾ ಅಥವಾ ಹೋರಾಟಗಾರರ ಪ್ರಾಣ ತೆಗೆದುಕೊಳ್ಳುತ್ತವಯಾ ಎಂದು ಕಾದು ನೋಡಬೇಕಿದೆ.