ಗದಗ: ಎಲ್ಲೆಂದರಲ್ಲಿ ಗುಂಡಿಗಳಿಂದ ತುಂಬಿರೋ ರಸ್ತೆ ಒಂದೆಡೆಯಾದ್ರೆ ವಾಹನ ಓಡಿಸಲು ಪ್ರಯಾಸ ಪಡ್ತಿರೋ ಸವಾರರು ಇನ್ನೊಂದೆಡೆ. ಪಂಕ್ಚರ್ ಆದ ಬೈಕನ್ನು ತಳ್ತಿರೋ ಸವಾರ ಮತ್ತೊಂದೆಡೆ ಇದು ಗ್ರಾಮೀಣಾಭಿವೃದ್ಧಿ ಸಚಿವ ಹೆಚ್.ಕೆ ಪಾಟೀಲ್ ಅವರ ತವರು ಕ್ಷೇತ್ರದ ರಸ್ತೆಯ ಪರಸ್ಥಿತಿ.
ಗದಗದಿಂದ 5 ಕಿಲೋಮೀಟರ್ ದೂರದಲ್ಲಿರೋ ಸಂಭಾಪುರಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಪಿಎಂಜಿಎಸ್ವೈ ಇಲಾಖೆ ಉಸ್ತುವಾರಿಯಲ್ಲಿ 4 ಕೋಟಿ 93 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಯೋಜನೆ ಪ್ರಕಾರ ಇದು 2016 ಜುಲೈ 3ರಂದು ಮುಗಿಯಬೇಕಾಗಿತ್ತು. ಆದ್ರೆ ಮೂರು ತಿಂಗಳ ಹಿಂದಷ್ಟೆ ಮುಕ್ತಾಯವಾಗಿದೆ. ಗ್ರಾಮದಿಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸೋ ಮುಖ್ಯ ರಸ್ತೆಯಲ್ಲಿ ಪ್ರತಿದಿನ ನೂರಾರು ಜನ ಓಡಾಡ್ತಾರೆ. ಆದ್ರೆ ಕೆಲಸ ಮುಗಿದ ಮೂರೇ ತಿಂಗಳಿಗೆ ಈ ರಸ್ತೆ ತನ್ನ ನಿಜ ರೂಪವನ್ನು ತೋರಿಸಿದೆ. ಈ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ.
ಈ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ, ಕಾಮಗಾರಿ ಬಗ್ಗೆ ದೂರುಗಳಿವೆ. ಹೀಗಾಗಿ ಹಣ ಬಿಡುಗಡೆ ಮಾಡಿಲ್ಲ. ಆಗಿರೋ ತಪ್ಪನ್ನು ಸರಿಪಡಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿ ಅಂತಾ ತಿಪ್ಪೇ ಸಾರಿಸುತ್ತಾರೆ ಅಂತಾ ಸ್ಥಳೀಯರು ಆರೋಪಿಸಿದ್ದಾರೆ.
ಒಟ್ಟಿನಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಬಗ್ಗೆ ಮಾತಾಡೋ ಸಚಿವ ಹೆಚ್.ಕೆ ಪಾಟೀಲ್ ಅವರ ತವರು ಜಿಲ್ಲೆಯಲ್ಲಿಯೇ ಇಂತಹ ಕಳಪೆ ಕಾಮಗಾರಿ ನಡೀತಿದ್ರೂ ಸಚಿವರೂ ಸೇರಿದಂತೆ ಯಾರೂ ಇತ್ತ ತಿರುಗಿ ನೋಡದೇ ಇರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ.