ಬೆಂಗಳೂರು: ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ದೊಡ್ಡನಹಳ್ಳಿ ಗ್ರಾಮದಲ್ಲಿ ಭೂಕಂಪಿಸಿದ್ದು ಗ್ರಾಮಸ್ಥರು ಇದೀಗ ಆತಂಕಕ್ಕೆ ಒಳಗಾಗಿದ್ದಾರೆ.
ತಡರಾತ್ರಿ ಸುಮಾರು 12:20ರ ಸುಮಾರಿನಲ್ಲಿ ಸುಖನಿದ್ರೆಯಲ್ಲಿ ಮಲಗಿದ್ದ ಗ್ರಾಮಸ್ಥರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಮನೆಯಲ್ಲಿದ್ದ ಪಾತ್ರೆ ಸಾಮಾನು, ಟಿವಿ ಮೇಲಿದ್ದ ಸಾಮಾಗ್ರಿಗಳೆಲ್ಲ ಕೆಳಗೆ ಬಿದ್ದಿವೆ. ಕೂಡಲೇ ಮನೆಯವರೆಲ್ಲಾ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಘಟನೆಯಲ್ಲಿ 5 ಮನೆಗಳಲ್ಲಿನ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಗ್ರಾಮದ ಚಿಕ್ಕೇಗೌಡ, ಚನ್ನಾಜಮ್ಮ, ತಮ್ಮಯಣ್ಣ, ಚಿಕ್ಕಮ್ಮ, ಹಾಗೂ ಸಿದ್ದೇಗೌಡ ಎಂಬುವವರ ಮನೆಯ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಕಂಪನದಿಂದ ಇದೀಗ ಗ್ರಾಮಸ್ಥರು ಭಯದಲ್ಲಿದ್ದಾರೆ.
ಗ್ರಾಮದಲ್ಲಿ ಈ ಹಿಂದೆ 9 ವರ್ಷಗಳ ಹಿಂದೆ ಸಹ ಲಘು ಭೂಕಂಪವಾಗಿ ಒಂದು ಮನೆ ಉರುಳಿ ಬಿದ್ದಿತ್ತು. ಅಲ್ಲದೇ ಹಲವು ಮನೆಗಳ ಗೋಡೆ ಸಹ ಬಿರುಕು ಮೂಡಿದ್ವು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಒಟ್ಟಾರೆ ದೊಡ್ಡೇನಳ್ಳಿ ಗ್ರಾಮದ ಜನ ಇದೀಗ ತಡರಾತ್ರಿ ಉಂಟಾದ ಭೂ ಕಂಪನದಿಂದ ಭಯ ಭೀತರಾಗಿದ್ದು ರಿಕ್ಟರ್ ಮಾಪಕದಲ್ಲಿ ಎಷ್ಟು ತೀವ್ರತೆ ಯಲ್ಲಿ ಭೂಕಂಪನವಾಗಿದೆ ಎಂಬುದನ್ನು ತಿಳಿಯಲು ಕುತೂಹಲವನ್ನು ಸಹ ವ್ಯಕ್ತಪಡಿಸ್ತಾ ಇದ್ದಾರೆ.