ಮಂಡ್ಯ: ರಮ್ಯಾನಾದ್ರು ಸ್ಪರ್ಧೆ ಮಾಡಲಿ, ಎಸ್ಎಂ.ಕೃಷ್ಣ ಆದರೂ ಸ್ಪರ್ಧೆ ಮಾಡಲಿ. ಯಾರೇ ಸ್ಪರ್ಧೆ ಮಾಡಿದ್ರು ಮುಂಬರುವ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ ಎಂದು ಮಂಡ್ಯ ಶಾಸಕ ಅಂಬರೀಶ್ ಹೇಳಿದ್ದಾರೆ.
ಮದ್ದೂರಿನಲ್ಲಿ ಮಾತನಾಡಿದ ಅವರು, ಯಾರೇ ಅಭ್ಯರ್ಥಿ ಆದರೂ ನನ್ನ ಸ್ಪರ್ಧೆ ಖಚಿತ. ನಾನು ಬೇರೆ ಪಕ್ಷಕ್ಕೆ ಹೋಗೋದಿಲ್ಲ. ಮುಂದಿನ ಚುನಾವಣೆಗೆ ನಾನು ಆಕಾಂಕ್ಷಿಯಲ್ಲ. ನಾನೇ ಬಾಸು, ನಾನೇ ಅಭ್ಯರ್ಥಿ ಎಂದು ಹೇಳಿದ್ರು. ಇದೇ ವೇಳೆ ರಮ್ಯಾಗೆ ಟಿಕೆಟ್ ಎಂಬ ವಿಚಾರದ ಬಗ್ಗೆ ಮಾತನಾಡುತ್ತ ರಮ್ಯಾಗೆ ಕೊಟ್ಟರೂ ಸಂತೋಷ. ಬೇಡ ಅಂದವರು ಯಾರು? ರಮ್ಯಾ, ಎಸ್ಎಂ.ಕೃಷ್ಣ, ಮಹೇಶ್ಚಂದ್ರ ಯಾರಿಗಾದರೂ ಟಿಕೆಟ್ ಕೊಡಲಿ. ನಾನು ಸ್ಪರ್ಧೆ ಮಾಡೋದು ಹಂಡ್ರೆಡ್ ಪರ್ಸೆಂಟ್ ಖಚಿತ ಎಂದು ತಿಳಿಸಿದ್ರು.
ಮದ್ದೂರಿನಲ್ಲಿ ಮತನಾಡುವ ಮುಂಚೆ ತಮ್ಮ ಸ್ವಗ್ರಾಮ ದೊಡ್ಡರಸಿನಕೆರೆಯಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಮ್ಮ ಆರೋಗ್ಯದ ಬಗ್ಗೆ ಟೀಕೆ ಮಾಡುವವರಿಗೆ ಖಡಕ್ ಆಗಿ ಪ್ರತ್ಯುತ್ತರ ನೀಡಿದ್ರು. ಕೆಲವರು ಅಂಬರೀಶ್ ಅವರಿಗೆ ಹುಷಾರಿಲ್ಲ ಎಂದು ಏನೇನೋ ಹೇಳ್ತಾರೆ. ಆದ್ರೆ ಅವರಿಗೂ ಒಂದು ದಿನ ಹುಷಾರಿರುವುದಿಲ್ಲ, ಅದನ್ನ ಮರೆತಿದ್ದಾರೆ. ಎಲ್ಲರೂ ಹುಷಾರು ತಪ್ಪುವುದು ಸಹಜ. ಈಗ ನಾನು ಚೆನ್ನಾಗೇ ಇದ್ದೇನೆ. ಏನೂ ತೊಂದರೆಯಿಲ್ಲ ಎಂದು ತಿಳಿಸಿದ್ರು.
ಆದ್ರೆ ಅಂಬರೀಶ್ ಅವರ ಕೆನ್ನೆಯ ಮೇಲೆ ಬ್ಯಾಂಡೆಜ್ ಒಂದು ಹಾಗೇ ಇದ್ದದ್ದು ಅವರ ಅಭಿಮಾನಿಗಳಿಗೆ ಅಂಬಿ ಆರೋಗ್ಯದ ಬಗ್ಗೆ ಆತಂಕ ಸೃಷ್ಟಿಸಿದ್ದು ಮಾತ್ರ ಸುಳ್ಳಲ್ಲ.