ಕನ್ನಡ ಸಿನಿಮಾ ರಂಗದ ಹಿರಿಯ ನಟಿ ಡಾ.ಲೀಲಾವತಿ (Leelavati) ಅವರು ನೆಲಮಂಗಲ ಹತ್ತಿರದ ಸೋಲದೇವನಹಳ್ಳಿಯಲ್ಲಿ ನಿರ್ಮಿಸಿರುವ ಆಸ್ಪತ್ರೆಯನ್ನು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಉದ್ಘಾಟಿಸಿದರು. ಹಿರಿಯ ನಟಿಯ ಈ ಸೇವೆಯನ್ನು ಶ್ಲಾಘಿಸಿದ ಮುಖ್ಯಮಂತ್ರಿಗಳು, ಲೀಲಾವತಿ ಅವರನ್ನು ಮನಸಾರೆ ಹೊಗಳಿದರು. ಇನ್ನೂ ನೂರ್ಕಾಲ ಬಾಳಬೇಕು ಎಂದು ಹಾರೈಸಿದರು. ಅಲ್ಲದೇ, ಚಿತ್ರ ಜಗತ್ತಿನ ಎವರ್ ಗ್ರೀನ್ ಕಲಾವಿದೆ ಎಂದು ಬಣ್ಣಿಸಿದರು.
ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಬೊಮ್ಮಾಯಿ, ‘ಸೋಲದೇವನಹಳ್ಳಿ (Soladevanahalli) ಅಂದ್ರೆ ಏನಿದು ಅಂತ ಯೋಚನೆ ಮಾಡ್ತಿದ್ದೆ. ದೇವರು ಕೂಡ ಇಲ್ಲಿಯ ನಿಸರ್ಗ ಸೌಂದರ್ಯಕ್ಕೆ ಸೋತಿರುವುದೇ ಸೋಲದೇವನಹಳ್ಳಿ. ಇಂತಹ ಜಾಗದಲ್ಲಿ ಲೀಲಾವತಿ ಅವರು ನೆಲೆಸಿದ್ದಾರೆ. ಬದುಕಿನಲ್ಲಿ ನಿರಂತರವಾಗಿ ಎಲ್ಲವನ್ನೂ ನೀಡಿ, ಎಲ್ಲಾ ಅಡೆತೆಡೆಗಳನ್ನೂ ಹಾಗೂ ಹಲವಾರು ಸವಾಲನ್ನು ಎದರಿಸಿದ್ದಾರೆ. ಲೀಲಾವತಿಯವರು ಮನಸ್ಸು ಮಾಡಿದ್ರೆ ಪ್ರತಿಷ್ಠಿತ ಬಡಾವಣೆಗಳಲ್ಲಿ ಮನೆ ಮಾಡಿಕೊಂಡು ನೆಮ್ಮದಿಯಾಗಿ ಜೀವನ ಮಾಡಬಹುದಿತ್ತು. ಆದರೆ, ಎಲ್ಲಾ ಬಿಟ್ಟು ಈ ಸೋಲದೇವನಹಳ್ಳಿಗೆ ಬಂದು ತೋಟ ಮಾಡಿದ್ದಾರೆ. ಅವರೇ ಹೇಳಿದ್ ಹಾಗೇ ಈ ಜಾಗ ಸಮತಟ್ಟಾಗಿರಲಿಲ್ಲ. ಆದ್ರೆ ಅವರ ಮನಸ್ಸು ಸಮತಟ್ಟವಾಗಿದೆ’ ಎಂದು ಲೀಲಾವತಿ ಅವರನ್ನು ಹಾಡಿ ಹೊಗಳಿದರು ಸಿಎಂ. ಇದನ್ನೂ ಓದಿ:ರಿಲೇಶನ್ ಶಿಪ್ ಇಟ್ಕೊಳ್ಳೋಕೆ ಬಿಗ್ ಬಾಸ್ ಮನೆಗೆ ಬಂದಿಲ್ಲ ಎಂದು ಕಣ್ಣೀರಿಟ್ಟ ನಟಿ ಮಯೂರಿ
ಇದೇ ಸಂದರ್ಭದಲ್ಲಿ ಲೀಲಾವತಿ ಅವರ ಮತ್ತೊಂದು ಬೇಡಿಕೆಯ ಬಗ್ಗೆಯೂ ಮಾತನಾಡಿದ ಬೊಮ್ಮಾಯಿ, ಈ ಸೋಲದೇವನಹಳ್ಳಿಗೆ ಒಂದು ಪಶು ಆಸ್ಪತ್ರೆ (Hospital) ಬೇಕು ಎಂದು ಕೇಳಿದ್ದಾರೆ. ಆದಷ್ಟು ಬೇಗ ಈ ಬೇಡಿಕೆಯನ್ನು ಈಡೇರಿಸುತ್ತೇನೆ ಅಂದಿದ್ದಾರೆ. ಲೀಲಾವತಿ ಅವರು ನಿರ್ಮಿಸಿರುವ ಆಸ್ಪತ್ರೆಗೆ ಬೇಕಿರುವ ಎಲ್ಲ ಸೌಲಭ್ಯಗಳನ್ನೂ ಒದಗಿಸುವ ಭರವಸೆ ಕೊಟ್ಟಿದ್ದಾರೆ. ಸರ್ಕಾರದಿಂದ ಡಾಕ್ಟರ್ ಮತ್ತು ನರ್ಸ್ ನೇಮಿಸುವ ಕುರಿತು ಅವರು ಮಾತನಾಡಿದರು.