ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ಬಿಜೆಪಿಯನ್ನು ಕಟ್ಟಿ ಹಾಕುವುದು ಹೇಗೆ ಎಂದು ಪ್ರತಿಪಕ್ಷಗಳು ಆಲೋಚಿಸುತ್ತಿರುವಾಗ ಬಿಹಾರದ ಆರ್ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಮಹಾಘಟಬಂಧನ್ ಮಾಡಿದ್ರೆ ಸಾಧ್ಯವಿದೆ ಎಂದು ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು ಬಿಹಾರದಲ್ಲಿ ಕಾಂಗ್ರೆಸ್, ಆರ್ಜೆಡಿ, ಜೆಡಿಯು ಮೈತ್ರಿಯಿಂದ ಬಿಜೆಪಿಗೆ ಸೋಲಾಗಿದೆ. ಈ ಮಹಾಘಟಬಂಧನ್ ಮತ್ತಷ್ಟು ವಿಸ್ತರಿಸಬೇಕು. ಪಶ್ಚಿಮಬಂಗಾಳದಲ್ಲಿ ಟಿಎಂಸಿ, ಉತ್ತರ ಪ್ರದೇಶದಲ್ಲಿ ಎಸ್ಪಿ, ಬಿಎಸ್ಪಿ, ಸೇರಿದ್ರೆ ಬಿಜೆಪಿಯನ್ನು ಸೋಲಿಸಬಹುದು ಎಂದು ಅವರು ಹೇಳಿದ್ದಾರೆ.
ಪಂಜಾಬ್ನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಬಿಹಾರದಲ್ಲಿ ಬಿಜೆಪಿಗೆ ಸೋಲಾಗಿದೆ. ಉತ್ತರಪ್ರದೇಶದಲ್ಲಿ ಎಸ್ಪಿ, ಬಿಎಸ್ಪಿ, ಕಾಂಗ್ರೆಸ್ ಒಂದಾದರೆ ಶೇಖಡಾವಾರು ಮತಗಳ ಲೆಕ್ಕಾಚಾರದಲ್ಲಿ ಬಿಜೆಪಿಗೆ ಸೋಲಾಗಬಹುದು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಇರುವ ಕಾರಣ ಅಲ್ಲೂ ಬಿಜೆಪಿಗೆ ಕಷ್ಟವಿದೆ ಎಂದು ಅವರು ತಿಳಿಸಿದ್ದಾರೆ.
ಮಮತಾ ಬ್ಯಾನರ್ಜಿ, ಸೋನಿಯಾ ಗಾಂಧಿ, ಮಾಯಾವತಿ, ಅಖಿಲೇಶ್ ಯಾದವ್ ಅವರನ್ನು ಬಿಜೆಪಿ ಶೋಷಣೆ ಮಾಡಿದೆ. ಹೀಗಾಗಿ ಈ ಮೈತ್ರಿ ವಿಚಾರದ ಬಗ್ಗೆ ನಾನು ಮಾಯಾವತಿ ಜೊತೆ ಮಾತನಾಡಿದ್ದೇನೆ. ಒಂದು ವೇಳೆ ಮೈತ್ರಿ ಯಶಸ್ವಿಯಾದರೆ ಉತ್ತರ ಭಾರತದಲ್ಲಿ ಪೂರ್ವದಿಂದ ಪಶ್ಚಿಮದವರೆಗಿನ ಬಿಜೆಪಿ ಬಲ ಕುಗ್ಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದೇ ವೇಳೆ ಮಹಾರಾಷ್ಟ್ರದಲ್ಲಿ ಬಿಜೆಪಿ ಶಿವಸೇನೆ ಮಧ್ಯೆ ಮನಸ್ತಾಪ ಇದೆ. ಕೇರಳದಲ್ಲಿ ಬಿಜೆಪಿ ಗೆಲ್ಲುವುದು ಕಷ್ಟ ಎಂದು ಅವರು ಅಭಿಪ್ರಾಯಪಟ್ಟರು.
2017ರ ಉತ್ತರಪ್ರದೇಶ ಚುನಾವಣೆಯ 403 ಸ್ಥಾನಗಳ ಪೈಕಿ ಬಿಜೆಪಿ 312, ಎಸ್ಪಿ 47, ಬಿಎಸ್ಪಿ 19, ಕಾಂಗ್ರೆಸ್ 7ರಲ್ಲಿ ಜಯಗಳಿಸಿತ್ತು. ಶೇಖಡವಾರು ಮತಗಳಿಕೆಯಲ್ಲಿ ಬಿಜೆಪಿಗೆ ಶೇ.39.7,ಬಿಎಸ್ಪಿ ಶೇ.22.2, ಎಸ್ಪಿ ಶೇ.21.8, ಕಾಂಗ್ರೆಸ್ ಶೇ.6.3ರಷ್ಟು ಪಾಲು ಪಡೆದುಕೊಂಡಿತ್ತು.