ಬಳ್ಳಾರಿ: ಪ್ರೇಮಿಗಳ ದಿನದಂದೇ ಪ್ರೀಯತಮನೊಬ್ಬ ಎದೆಗೆ ಚಾಕು ಚುಚ್ಚಿಕೊಂಡಿರುವ ಘಟನೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ನಡೆದಿದೆ.
ಮಿಸ್ಟರ್ ಕರ್ನಾಟಕ ದೇಹದಾರ್ಢ್ಯ ಸ್ಪರ್ಧಿ ವೀರೇಶ್ ಪ್ರೇಮಿಗಳ ದಿನದಂದು ಪ್ರೀಯತಮೆಯನ್ನು ಭೇಟಿಯಾಗದಕ್ಕೆ ಚಾಕು ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವೀರೇಶ್ ಹೊಸಪೇಟೆ ಪಟ್ಟಣದ ಅನ್ಯ ಜಾತಿಯ ಯುವತಿಯನ್ನು ಪ್ರೀತಿಸುತ್ತಿದ್ದನು. ಇಬ್ಬರು ಹಲವಾರು ದಿನಗಳಿಂದ ಜೊತೆ ಜೊತೆಯಾಗಿ ಪಾರ್ಕ್, ಸಿನಿಮಾ ಎಂದು ಓಡಾಡುತ್ತಿದ್ದರು.
ಇಬ್ಬರು ಮದುವೆಯಾಗುವ ನಿರ್ಧಾರ ಸಹ ಮಾಡಿದ್ದರು. ಆದರೆ ಇವರಿಬ್ಬರ ಪ್ರೀತಿಯ ವಿಚಾರ ಯುವತಿಯ ಮನೆಯವರಿಗೆ ತಿಳಿದಿದೆ. ಈ ವೇಳೆ ವೀರೇಶ್ ಕೀಳು ಜಾತಿಗೆ ಸೇರಿದವನು ಅವನನ್ನು ಮರೆತುಬಿಡು ಎಂದು ಯುವತಿಯ ಮನೆಯವರು ಆಕೆಯನ್ನು ಮನೆಯಲ್ಲಿ ಕೂಡಿ ಹಾಕಿದ್ದಾರೆ.
ಇಂದು ಪ್ರೇಮಿಗಳ ದಿನವಾಗಿದ್ದರಿಂದ ಪ್ರಿಯತಮೆಯನ್ನು ನೋಡಲು ಸಾಧ್ಯವಾಗಿಲ್ಲ ಎಂದು ವೀರೇಶ್ ಮನನೊಂದು ಎದೆಗೆ ಚಾಕುಚುಚ್ಚಿಕೊಂಡಿದ್ದಾನೆ. ಸದ್ಯಕ್ಕೆ ವೀರೇಶ್ ಪರಿಸ್ಥಿತಿ ಗಂಭೀರವಾಗಿದ್ದು, ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.