ಮಂಡ್ಯ: ಸಿಎಂ ಕಾರ್ಯಕ್ರಮದ ಸೆಕ್ಯೂರಿಟಿ ಹೆಸರಲ್ಲಿ ಆಂಬುಲೆನ್ಸ್ ನಿಂದ ರೋಗಿಯನ್ನು ಕೆಳಗಿಳಿಸಿ ನಡೆಸಿ ಕಳುಹಿಸಿದ ಅಮಾನವೀಯ ಘಟನೆ ಮಂಡ್ಯದಲ್ಲಿ ನಡೆದಿದೆ.
ಜಿಲ್ಲೆಯ ನಾಗಮಂಗಲಕ್ಕೆ ಅಭಿವೃದ್ದಿ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಲು ಸೋಮವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗಮಿಸಿದ್ದರು. ಈ ವೇಳೆ ನಾಗಮಂಗಲದಲ್ಲಿ ಸ್ಟೇಡಿಯಂನಲ್ಲಿ ಹೆಲಿಕಾಪ್ಟರ್ ನಲ್ಲಿ ಇಳಿದು ಎದುರಿನ ಸ್ಟೇಜ್ ಗೆ ಹೋಗುವಾಗ ಆಂಬುಲೆನ್ಸ್ ನಲ್ಲಿ ಮಹಿಳಾ ರೋಗಿಯೊಬ್ಬರನ್ನು ಕರೆತರಲಾಗುತ್ತಿತ್ತು.
ಆದರೆ ಸಿಎಂ ಭದ್ರತೆ ಹೆಸರಲ್ಲಿ ಪೊಲೀಸರು ಹಳ್ಳಿಯಿಂದ ಮಹಿಳಾ ರೋಗಿಯನ್ನು ಕರೆತರುತ್ತಿದ್ದ ಆಂಬುಲೆನ್ಸ್ ಅರ್ಧಕ್ಕೆ ತಡೆದಿದ್ದಾರೆ. ಭದ್ರತೆ ಹೆಸರಲ್ಲಿ ರೋಗಿಯನ್ನು ತಡೆದಿದ್ದರಿಂದ ಮಹಿಳೆಯನ್ನು ನಡೆಸಿಕೊಂಡೇ ಕರೆದುಕೊಂಡು ಹೋಗಿದ್ದಾರೆ. ಈ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.
ಮಹಿಳೆಯನ್ನ ನೋಡಿ ಮರುಗಿದ ಜನ ಇಂತಹ ವಿಷಯಗಳ ಬಗ್ಗೆ ಮುಖ್ಯಮಂತ್ರಿಗಳೇ ಪೊಲೀಸರಿಗೆ ತಿಳಿಹೇಳಬೇಕು. ವೇದಿಕೆ ಮೇಲೆ ಅಭಿವೃದ್ಧಿ ಬಗ್ಗೆ ಮಾತನಾಡುವಾಗ ಇಂತಹ ಮಾನವೀಯತೆ ವಿಷಯಗಳ ಬಗ್ಗೆ ಸಿಎಂ ಪಾಠ ಮಾಡಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.