ಶಿವಮೊಗ್ಗ: ಈ ಬಾರಿ ಕಾಂಗ್ರೆಸ್ ನನ್ನನ್ನು ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವಂತೆ ಸೂಚಿಸಿದರೆ ಪಕ್ಷವೇ ನನ್ನ ಚುನಾವಣಾ ವೆಚ್ಚ ಭರಿಸಬೇಕು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಅವರು, ನನ್ನ ರಾಜಕೀಯ ವೃತ್ತಿ ಜೀವನದಲ್ಲಿ ಕೈ ಮತ್ತು ಬಾಯಿ ಶುದ್ಧವಿಟ್ಟುಕೊಂಡು ಅಧಿಕಾರ ಕಾರ್ಯನಿರ್ವಸಿದ್ದೇನೆ. ಮುಂದೆ ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಮತ್ತೆ ಸ್ಪರ್ಧಿಸುವಂತೆ ಹೇಳಿದರೆ ನಾನು ಸ್ಪರ್ಧಿಸುತ್ತೇನೆ. ಆದರೆ ಚುನಾವಣೆಗೆ ಪಕ್ಷವೇ ಹಣಕೊಡಬೇಕು ಎಂದು ಹೇಳಿದರು.
ಕಂದಾಯ ಸಚಿವನಾಗಿ ಶುದ್ಧವಾಗಿ ಕೆಲಸ ಮಾಡಿದ್ದೇನೆ. ಭೂಮಿಯ ಹೋರಾಟದಿಂದ ನಾನು ರಾಜಕೀಯವಾಗಿ ಬೆಳೆದವನು. ಕಂದಾಯ ಇಲಾಖೆ ದೊರಕಿದ್ದು ನನ್ನ ಸೌಭಾಗ್ಯ. ಇಲಾಖೆಯಲ್ಲಿ ಕೆಲಸ ಮಾಡಿದ್ದು, ರಾಜಕೀಯ ಮುಕ್ತಿ ದೊರಕಿದಂತಾಗಿದೆ. ನಾನು ಸಭಾಪತಿ ಅಥವಾ ಮಂತ್ರಿ ಸ್ಥಾನಕ್ಕೆ ನಾನು ಯಾವುದೇ ಬೇಡಿಕೆ ಇಟ್ಟಿರಲಿಲ್ಲ. ಪಕ್ಷ ತೀರ್ಮಾನ ಮಾಡಿ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ ಎಂದರು.
ಸಾಗರ ಕ್ಷೇತ್ರದಲ್ಲಿ ನಟಿ ಜಯಮಾಲಾ ಕೂಡ ಸ್ಪರ್ಧಿಸುವ ಆಸಕ್ತಿ ತೋರಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಸಚಿವ ಕಾಗೋಡು ತಿಮ್ಮಪ್ಪ ಕ್ಷೇತ್ರದ ಮೇಲೆ ಜಯಮಾಲಾ ಕಣ್ಣು?