ಕೊಪ್ಪಳ: ಸರ್ಕಾರ ಸುಮಾರು 3 ಕೋಟಿ ರೂ. ಸುರಿದು ಕೆರೆ ಕಟ್ಟಿಸ್ತು. ಆದರೆ ಕೆರೆ ಏರಿ ಒಡೆದು ಅಪಾರ ನೀರು ಪೋಲಾಗಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಸುಳೇಕಲ್ ಗ್ರಾಮದಲ್ಲಿ ನಡೆದಿದೆ.
ಶುಕ್ರವಾರ ಸಂಜೆ ಸುಳೇಕಲ್ ಗ್ರಾಮದ ಹೊರವಲಯದಲ್ಲಿರೋ ಕೆರೆಯ ಏರಿ ಒಡೆದು ಅಪಾರ ಪ್ರಮಾಣ ನೀರು ಪೋಲಾಗಿದೆ. ಈ ಕೆರೆ ಸುಮಾರು 16 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದ್ದು, ರಾಜೀವ್ ಗಾಂಧಿ ವಾಟರ್ ಬಸ್ ಮಿಷನ್ ಕುಡಿವ ನೀರಿನ ಯೋಜನೆಯಡಿ ನಿರ್ಮಾಣವಾಗಿತ್ತು.
ಶಾಸಕ ಶಿವರಾಜ ತಂಗಡಗಿ ಬೆಂಬಗಲಿಗರಿಂದ ನಿರ್ಮಾಣವಾಗಿದ್ದ ಕೆರೆಯಾಗಿದ್ದು, ಇದರಿಂದ ಸುಮಾರು 16 ಗ್ರಾಮಕ್ಕೆ ಕುಡಿವ ನೀರು ಒದಗಿಸುವ ಯೋಜನೆಯಾಗಿತ್ತು. ಈ ಕೆರೆಯನ್ನ ಬರೋಬ್ಬರಿ ಮೂರು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಆದರೆ ಕಳಪೆ ಕಾಮಗಾರಿಯಿಂದ ಕೆರೆ ಒಡೆದಿದೆ. ಸಮರ್ಪಕ ನಿರ್ವಹಣೆ ಇಲ್ಲದೆ ಅಪಾರ ಪ್ರಮಾಣದ ನೀರು ಮಣ್ಣು ಪಾಲಾಗಿದೆ.
ಕೆರೆ ಏರಿ ಒಡೆದ ಬಗ್ಗೆ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ, ಅಧಿಕಾರಿಗಳು ಸ್ಥಳಕ್ಕೆ ಬರಲಿಲ್ಲ.