ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಶಂಕಿತ ಆರೋಪಿ ಕೆ.ಟಿ.ನವೀನ್ ಅಲಿಯಾಸ್ ಹೊಟ್ಟೆ ಮಂಜನನ್ನು ಎಸ್ಐಟಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಫೆಬ್ರವರಿ 18ರಂದು ಉಪ್ಪಾರಪೇಟೆ ಠಾಣೆಯ ಪೊಲೀಸರು ನವೀನ್ ಕುಮಾರ್ ನನ್ನು ಬಂಧಿಸಿದ್ದರು. ನವೀನ್ ಬಂಧನದ ವೇಳೆ 32 ಕ್ಯಾಲಿಬರ್ ಗನ್ ಹಾಗೂ 15 ಜೀವಂತ ಗುಂಡುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಪೊಲೀಸರು ಇಂದು ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನವೀನ್ನನ್ನು ಗೌರಿ ಲಂಕೇಶ್ ಹತ್ಯೆಯ ಎಸ್ಐಟಿ ತನಿಖಾ ತಂಡ ವಶಕ್ಕೆ ಪಡೆದುಕೊಂಡಿದೆ.
ಬಂಧಿತ ನವೀನ್ ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ನಿವಾಸಿ ಎಂದು ಗುರುತಿಸಲಾಗಿದೆ. ನವೀನ್ ಸನಾತನ ಸಂಸ್ಥೆ ಮತ್ತು ಹಿಂದೂ ಯುವಸೇನೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದನು. ನವೀನ್ ನಿಂದ ವಶಕ್ಕೆ ಪಡೆದುಕೊಳ್ಳಲಾದ ಗನ್ ಮತ್ತು ಗುಂಡುಗಳನ್ನು ಎಫ್ಎಸ್ಎಲ್ ಗೆ ಕಳುಹಿಸಲಾಗಿದೆ. ಗೌರಿ ಅವರ ದೇಹದಲ್ಲಿ ಪತ್ತೆಯಾದ ಗುಂಡು ಮತ್ತು ಈತನ ಬಳಿಯಿದ್ದ ಗುಂಡುಗಳಿಗೆ ಸಾಮ್ಯತೆ ಇದೆಯಾ ಎಂಬ ಮಾರ್ಗದಲ್ಲಿ ತನಿಖೆ ನಡೆಯಲಾಗುತ್ತಿದೆ ಅಂತಾ ಪಬ್ಲಿಕ್ ಟಿವಿ ಮೂಲಗಳು ತಿಳಿಸಿವೆ.
ಹಿಂದೂ ಸಂಘಟನೆವೊಂದರಲ್ಲಿ ಸಕ್ರೀಯ ಕಾರ್ಯಕರ್ತನಾಗಿದ್ದ ನವೀನ್, ತನ್ನ ಶಿಷ್ಯರಾದ ಅಭಿ ಮತ್ತು ಅನಿ ಎಂಬಾತರಿಗೆ ರೈಫಲ್ ತರಬೇತಿ ನೀಡ್ತಿದ್ದ ಎನ್ನಲಾಗಿದೆ. ಬಿಹಾರದಿಂದ ಅಕ್ರಮವಾಗಿ ಗನ್ ಗಳನ್ನು ತರಿಸುತ್ತಿದ್ದನು. ಇನ್ನೂ ಗೌರಿ ಹತ್ಯೆ ನಡೆದ ದಿನದಂದು ನವೀನ್ ಎಲ್ಲಿದ್ದ, ಮೊಬೈಲ್ ನೆಟ್ವರ್ಕ್ ಪತ್ತೆ ಹಚ್ಚುತ್ತಿದ್ದಾರೆ.