ಮಂಡ್ಯ: ಕಾಂಗ್ರೆಸ್ನ ಮಾಜಿ ಸಂಸದ ಹೆಚ್.ವಿಶ್ವನಾಥ್ ಜೆಡಿಎಸ್ ಸೇರಲಿದ್ದಾರಾ ಎನ್ನುವ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಸಂಸದ ಸಿಎಸ್ ಪುಟ್ಟರಾಜು ಅವರ ಹೇಳಿಕೆಯಿಂದಾಗಿ ಈಗ ಈ ಪ್ರಶ್ನೆ ಹುಟ್ಟಿಕೊಂಡಿದೆ.
ರಾಜ್ಯದಲ್ಲಿ ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣಾ ಕಾವು ಪ್ರಾರಂಭವಾಗಿದೆ. ಈಗಾಗಲೇ ಕೆಲವು ಜೆಡಿಎಸ್ ನಾಯಕರು ಕಾಂಗ್ರೆಸ್ನತ್ತ ವಾಲಿದ್ದರೆ, ಕೆಲ ನಾಯಕರು ಜೆಡಿಎಸ್ನಿಂದ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ. ಇದಕ್ಕೆ ಪೂರಕ ಎಂಬಂತೆ ವಿಶ್ವನಾಥ್ ಸೇರಿದಂತೆ ಹಲವು ನಾಯಕರು ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ಪುಟ್ಟರಾಜು ಹೇಳುವ ಮೂಲಕ ರಾಜಕೀಯ ರಂಗದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ರಾಜ್ಯದಲ್ಲಿ ಜೆಡಿಎಸ್ ಪರವಾಗಿ ರಾಜಕೀಯ ಧೃವೀಕರಣ ನಡೆಯಲಿದೆ. ವಿಶ್ವನಾಥ್ ನಾನು ಒಳ್ಳೆಯ ಸ್ನೇಹಿತರು, ಪ್ರತಿನಿತ್ಯ ನಾವು ಭೇಟಿ ಮಾಡುತ್ತಿದ್ದೇವು. ಆ ಸಮಯದಲ್ಲಿ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದ್ದೇವೆ. ವಿಶ್ವನಾಥ್ ಕೂಡ ಸಮಯ ಬಂದಾಗ ತಿಳಿಸುತ್ತೇನೆ ಎಂದು ಹೇಳಿದ್ದಾರೆ ಎಂದು ಪುಟ್ಟರಾಜು ತಿಳಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ವಿಶ್ವನಾಥ್ ಬಹಿರಂಗವಾಗಿಯೇ ವಾಗ್ದಾಳಿ ನಡೆಸುತ್ತಿದ್ದರು. ವಿಶೇಷವಾಗಿ ಸಿದ್ದರಾಮಯ್ಯ ಅವರ ಆಡಳಿತವನ್ನು ಟೀಕಿಸುತ್ತಿದ್ದ ಅವರು, ಸಿದ್ದರಾಮಯ್ಯ ಅವರನ್ನು ಪಕ್ಷ ನಾಯಕರನ್ನಾಗಿ ಮಾಡಿದೆ. ಆದರೆ ಪಕ್ಷಕ್ಕಿಂತಲೂ ಸಿದ್ದರಾಮಯ್ಯ ದೊಡ್ಡವರಂತೆ ವರ್ತಿಸುತ್ತಿದ್ದಾರೆ ಎಂದು ವಿಶ್ವನಾಥ್ ಆರೋಪಿಸಿ ಹೈಕಮಾಂಡ್ಗೆ ಪತ್ರ ಬರೆದಿದ್ದರು.
ಎಚ್.ವಿಶ್ವನಾಥ್ ಮೈಸೂರು ಜಿಲ್ಲೆಯ ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಆಯ್ಕೆ ಆಗಿದ್ದ ವಿಶ್ವನಾಥ್ 2009ರಲ್ಲಿ ಮೈಸೂರಿನಿಂದ ಸಂಸದರಾಗಿ ಆಯ್ಕೆ ಆಗಿದ್ದರು.