ಹಾವೇರಿ: ಯುವಕನೊಬ್ಬ ಬಲವಂತವಾಗಿ ಮುತ್ತು ಕೊಟ್ಟಿದ್ದಕ್ಕೆ ಮನನೊಂದಿದ್ದ ಯುವತಿ ತುಂಗಾ ಮೇಲ್ದಂಡೆ ಯೋಜನೆ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ರಾಣೇಬೆನ್ನೂರು ತಾಲೂಕಿನ ಹನಮಾಪುರ ತಾಂಡಾದಲ್ಲಿ ನಡೆದಿದೆ.
ರೇಷ್ಮಾ ಲಮಾಣಿ(19) ಆತ್ಮಹತ್ಯೆಗೆ ಶರಣಾದ ಯುವತಿ. ರೇಷ್ಮಾ ಸಾವಿಗೆ ಯುವಕ ಸಂತೋಷ್ ಲಮಾಣಿ(25) ಕಾರಣ ಎಂದು ಆರೋಪಿಸಿ ಮೃತಳ ಪೋಷಕರು ದೂರು ನೀಡಿದ್ದು, ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?
ಆಗಸ್ಟ್ 26ರಂದು ಗ್ರಾಮದ ಗಣೆಶೋತ್ಸವದಲ್ಲಿ ಆಯೋಜನೆಗೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಲು ರೇಷ್ಮಾ ತೆರಳಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಎಲ್ಲರ ಮುಂದೆ ಸಂತೋಷ್ ಬಲವಂತವಾಗಿ ಮುತ್ತು ನೀಡಿದ್ದನು. ಇದರಿಂದ ಮನನೊಂದಿದ್ದ ರೇಷ್ಮಾ ಸೋಮವಾರ ಮಧ್ಯಾಹ್ನ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರೇಷ್ಮಾ ಆತ್ಮಹತ್ಯೆ ಶರಣಾದ ವಿಚಾರ ತಿಳಿದು ಸಂತೋಷ್ ಗ್ರಾಮದಿಂದ ನಾಪತ್ತೆಯಾಗಿದ್ದು, ಆತನ ಬಂಧನಕ್ಕೆ ಆಗ್ರಹಿಸಿ ಮೃತಳ ಸಂಬಂಧಿಕರು ಮಂಗಳವಾರ ರಾಣೇಬೆನ್ನೂರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಅಷ್ಟೇ ಅಲ್ಲದೇ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು.