ಬೆಂಗಳೂರು: ವಿದ್ಯುತ್ ಶಾಕ್ ಒಳಗಾಗಿ ಬಲಗೈ ಕಳೆದುಕೊಂಡಿದ್ದ 6 ವರ್ಷದ ಮಗಳನ್ನು ತಂದೆಯೊಬ್ಬ ದೂರ ಮಾಡಿದ್ದಾನೆ ಎಂದು ತಾಯಿ ಆರೋಪಿಸಿದ್ದಾರೆ.
ನೆಲಮಂಗಲ ಪಟ್ಟಣದ ರೇಣುಕಾನಗರದಲ್ಲಿ ಕಳೆದ ಒಂದು ತಿಂಗಳ ಹಿಂದೆ ಮನೆಯ ಮೇಲೆ ಆಟವಾಡುತ್ತಿದ್ದ ಮಗು ಆಯತಪ್ಪಿ ವಿದ್ಯುತ್ ತಂತಿಗೆ ಕೈ ತಗುಲಿದಾಗ, ಮಗುವಿನ ಬಲಗೈ ವಿದ್ಯುತ್ ಶಾಕ್ ಗೆ ಒಳಗಾಗಿ ಕೈ ಕಳೆದು ಕೊಂಡಿತ್ತು.
ಚಿಕಿತ್ಸೆಗೆಂದು ಮಗು ಆಶ್ರಿಯಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದಾಗ, ವೈದ್ಯರು ಪುಟಾಣಿ ಆಶ್ರೀಯಳ ಬಲಗೈ ತುಂಡರಿಸಿ ಜೀವವನ್ನ ಉಳಿಸಿದ್ದಾರೆ. ಆದರೆ ಮಗುವಿಗೆ ಈ ರೀತಿಯಾಗಿ ತಿಂಗಳುಗಳೇ ಕಳೆದರು, ಇಲ್ಲಿಯವರೆಗೂ ಪಾಪಿ ತಂದೆ ಸೈಯದ್ ಪಾಷ ಆಸ್ಪತ್ರೆಗಾಗಲಿ, ಮನೆಗಾಗಲಿ ಬಂದು ತಾನು ಜನ್ಮ ನೀಡಿದ ಮಗುವಿನ ಯೋಗಕ್ಷೇಮ ನೋಡಿಲ್ಲ ಎಂದು ಮಗುವಿನ ತಾಯಿ ಶಬೀನಬಾನು ಆರೋಪಿಸಿದ್ದಾರೆ.
ಅಲ್ಲದೆ ಮಗು ತನ್ನ ಬಲಗೈ ಕಳೆದುಕೊಂಡಿರೋದರಿಂದ ನೋಡಲು ಅಸಹ್ಯ ಹಾಗೂ ಮುಂದಿನ ಜೀವನ ಕಷ್ಟ ಎಂದು ತಾಯಿ ಮಗುವನ್ನು ತಿರಸ್ಕರಿಸಿ, ಎರಡನೇ ಮದುವೆಯಾಗುವುದಾಗಿ ಹೆಂಡತಿಗೆ ಬೆದರಿಕೆ ಹಾಕುತ್ತಿದ್ದಾನೆ. ಇನ್ನೂ ಸೂಕ್ತ ಪರಿಹಾರ ನೀಡುವ ಭರವಸೆಯನ್ನು ನೀಡಿದ್ದ ನೆಲಮಂಗಲ ಬೆಸ್ಕಾಂ ಅಧಿಕಾರಿಗಳು, ಆಸ್ಪತ್ರೆಯ ಖರ್ಚು ವೆಚ್ಚವನ್ನು ನಿಭಾಯಿಸಿ ಕೈತೊಳೆದು ಕೊಂಡಿದ್ದಾರೆ.
ಇತ್ತ ಗಂಡನ ಆಸರೆ ಇಲ್ಲದೆ ಇತ್ತ ನೆಲಮಂಗಲ ಬೆಸ್ಕಾಂ ಅಧಿಕಾರಿಗಳು ನೀಡಿದ ಪರಿಹಾರದ ಭರವಸೆ ಹುಸಿಯಾಗಿದೆ. ತಾಯಿ ಹಾಗೂ ಕೈ ಕಳೆದುಕೊಂಡಿರುವ ಪುಟ್ಟ ಮಗು ಕಣ್ಣೀರು ಹಾಕುತ್ತಿದ್ದು ಸಹಾಯದ ನಿರೀಕ್ಷೆಯಲ್ಲಿದ್ದಾರೆ.