ಮಡಿಕೇರಿ: ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಇದು ಕೊಡಗಿನ ಕಾಫಿ ಹಾಗೂ ಕರಿಮೆಣಸು ಬೆಳೆಗಾರರ ಸ್ಥಿತಿಯಾಗಿದೆ. ಬೇಕಾದಾಗ ಸಮಯದಲ್ಲಿ ಮಳೆ ಕೈಕೊಟ್ಟ ಪರಿಣಾಮ ಕಾಫಿ ಕರಿಮೆಣಸು ಗಿಡಗಳು ದಿನದಿಂದ ದಿನಕ್ಕೆ ಒಣಗುತ್ತಿವೆ.
ಡಿಸೆಂಬರ್ ನಲ್ಲಿ ಆರಂಭವಾಗುವ ಕಾಫಿ ಕೂಯ್ಲು ಮಾರ್ಚ್ವರೆಗೂ ನಡೆಯುತ್ತದೆ. ನಂತರ ಮಳೆ ಅಥವಾ ನೀರಾವರಿ ಮೂಲಕ ಬೆಳೆಗಾರರು ಕಾಫಿಗಿಡದಲ್ಲಿ ಹೂಗಳನ್ನರಳಿಸಿ ಮುಂದಿನ ಬೆಳೆಗೆ ತೋಟಗಳನ್ನ ಅಣಿಗೊಳಿಸುತ್ತಾರೆ. ಆದರೆ ಈ ಬಾರಿ ಕೊಡಗು ಜಿಲ್ಲೆಯಲ್ಲಿ ಕಡಿಮೆ ಮಳೆಯೇ ಬಿದ್ದ ಕಾರಣ ಕಾಫಿ ಗಿಡಗಳು ಒಣಗಲು ಆರಂಭವಾಗಿದೆ.
ಸಾಮಾನ್ಯವಾಗಿ ಫೆಬ್ರವರಿ ತಿಂಗಳಲ್ಲಿ ಕೊಡಗಿನಲ್ಲಿ ಮಳೆಯಾಗಿ ಕಾಫಿ ಗಿಡಗಳಲ್ಲಿ ಹೂ ಬರುವುದು ವಾಡಿಕೆ. ಅದರೆ ಈ ಬಾರಿ ಮಳೆಯೇ ಬಾರದೇ ಗಿಡಗಳು ನಾಶವಾಗುತ್ತಿವೆ. ಆದರೆ ಕಳೆದ ಒಂದು ವಾರದ ಹಿಂದೆ ಮಳೆ ಬಂದು ಕಾಫಿ ಗಿಡಗಳಲ್ಲಿ ಸ್ವಲ್ಪ ಪ್ರಮಾಣದ ಹೂ ಬಿಟ್ಟಿದೆ. ಈಗ ಹೂ ಬಿಟ್ಟಿರುವುದು ಈಗ ಸಮಸ್ಯೆಯಾಗಿದೆ.
ಕಾಫಿ ಬೆಳೆಯ ಜೊತೆಗೆ ಕರಿಮೆಣಸು ಬೆಳೆಯುತ್ತಾರೆ. ಈ ಬಾರಿ ಪ್ರತಿ ಕೆಜಿ ಮೆಣಸಿಗೆ 700 ರೂ ಇದೆ. ಆದರೆ ಮಳೆ ಇಲ್ಲದೇ ಮೆಣಸಿನ ಬೀಜವೆಲ್ಲವೂ ಹಾಳಾಗುತ್ತಿದ್ದು, ಗುಣಮಟ್ಟ ಕಡಿಮೆಯಾಗ್ತಿದೆ.
ಮುಂದಿನ ದಿನಗಳಲ್ಲಿ ಮಳೆ ಬರದಿದ್ದರೆ ಕರಿಮೆಣಸು ಗಿಡಗಳನ್ನು ತೆಗೆದು ಹೊಸದಾಗಿಯೇ ನಾಟಿ ಮಾಡಬೇಕಾಗುತ್ತದೆ. ಹೀಗೆ ಹೊಸದಾಗಿ ನಾಟಿ ಮಾಡಿದ ಬೆಳೆಯಿಂದ ಫಸಲು ಬರಲು ಸುಮಾರು 5 ರಿಂದ 7 ವರ್ಷ ಬೇಕಾಗುತ್ತದೆ. ಕೊಡಗು ಜಿಲ್ಲೆಯ ದಕ್ಷಿಣ ಭಾಗದ ಬಾಳೆಲೆ, ನಿಟ್ಟೂರು, ಮಾಯಾಮುಡಿ ಗ್ರಾಮಗಳ ರೈತರು ಈ ತೊಂದರೆಗೆ ಒಳಗಾಗಿದ್ದಾರೆ.