ಗದಗ: ನಗರದ ಕುಂಬಾರೇಶ್ವರ ಕಾಲೋನಿ ನಿವಾಸಿಗಳ ಜೀವನ ಒಂದು ರೀತಿ ನರಕಮಯವಾಗಿದೆ. ತಾವು ಸ್ನಾನ ಮಾಡಿದ ಬಚ್ಚಲು ನೀರನ್ನ ನಂತರ ತಾವೇ ತುಂಬಿ ಹೊತ್ತು ಹೊರಹಾಕುತ್ತಿದ್ದಾರೆ. ಕುಂಬಾರ ಕಲೋನಿಯಲ್ಲಿ ಅನೇಕ ವರ್ಷಗಳಿಂದ ರಸ್ತೆ, ಚರಂಡಿ, ಒಳಚರಂಡಿ, ಶೌಚಾಲಯ ಇಲ್ಲದ ಕಾರಣ ಸಾಕಷ್ಟು ಪರಿಶ್ರಮ ಪಡುತ್ತಿದ್ದಾರೆ. ರಸ್ತೆಗಳೆಲ್ಲಾ ಕೆಸರು ಗದ್ದೆಯಾಗಿವೆ.
ಶಾಲಾ ಮಕ್ಕಳು, ವಯೋವೃದ್ಧರು, ಮಹಿಳೆಯರು ಸುಲಭವಾಗಿ ನಡೆದಾಡಲಾಗುವುದಿಲ್ಲ. ಇದು ಒಂದೆರಡು ದಿನಗಳ ಪರಸ್ಥಿತಿ ಅಲ್ಲ. ಸ್ನಾನ ಮಾಡಿದ ನಂತರ ಬಂದ ನೀರನ್ನ ಬುಟ್ಟಿ ಅಥವಾ ಬಕೆಟ್ನಲ್ಲಿ ತುಂಬಿ ರಸ್ತೆ ಮಧ್ಯೆ ಇಲ್ಲವೇ ಬೇರೆ ಕಡೆ ಹಾಕುವ ಪದ್ಧತಿ ಇಲ್ಲಿ ಅನೇಕ ವರ್ಷಗಳಿಂದ ನಡೆದು ಬಂದಿದೆ. ಸುಮಾರು 20 ವರ್ಷಗಳಿಂದ ಅನೇಕ ಸಮಸ್ಯೆಗಳನ್ನು ಇಲ್ಲಿಯ ಜನ ಎದುರಿಸುತ್ತಿದ್ದಾರೆ.
ಈ ಸಮಸ್ಯೆ ಬಗ್ಗೆ ನಗರಸಭೆ ಸದಸ್ಯರು, ಅಧ್ಯಕ್ಷರು, ಅಧಿಕಾರಿಗಳ ಗಮನಕ್ಕೆ ತಂದರು ಕ್ಯಾರೆ ಅಂತಿಲ್ಲ. ಅನೇಕ ಜನ ಕಾಯಿಲೆಗೆ ತುತ್ತಾಗಿದ್ದು ಕಾಲೋನಿಯ ಜನರು ನಮ್ಮದು ನರಕದ ಜೀವನ ಅಂತ ನಗರಸಭೆ, ಜನ ಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.