ಹಾವೇರಿ: ಮುಂದಿನ ವಾರ ರಜೆ ಮೇಲೆ ಊರಿಗೆ ಬರೋದಾಗಿ ಹೇಳಿದ್ದ, ಯೋಧ ಇಂದು ಶವವಾಗಿ ಮನೆಗೆ ಬಂದಿದ್ದಾರೆ.
ಆಹಾರ ಅರಸಿ ಬನ್ನೇರುಘಟ್ಟ ಅರಣ್ಯ ಕಾಡಿಗೆ ಬಂದಿದ್ದ ಕಾಡಾನೆ ದಾಳಿಗೆ ಇಬ್ಬರು ಸಿಆರ್ ಪಿಎಫ್ ಯೋಧರು ಭಾನುವಾರ ಬಲಿಯಾಗಿದ್ದರು. ಕಾಡಾನೆ ದಾಳಿಗೆ ಮೃತಪಟ್ಟ ಪುಟ್ಟಪ್ಪ ಅವರ ಪಾರ್ಥಿವ ಶರೀರ ಇಂದು ಜಿಲ್ಲೆಯ ಸವಣೂರು ತಾಲೂಕಿನ ಶಿರಬಡಗಿ ಸ್ವಗ್ರಾಮ ಬಂದು ತಲುಪಿದೆ.
ಪುಟ್ಟಪ್ಪ ಅವರ ಸಾವಿನಿಂದ ಶಿರಬಡಗಿ ಗ್ರಾಮ ದುಃಖದಲ್ಲಿ ಮುಳುಗಿದೆ. 2005 ರಲ್ಲಿ ಸಿಆರ್ ಪಿಎಫ್ ಗೆ ಸೇರಿದ್ದ ಪುಟ್ಟಪ್ಪ, ಎರಡು ವರ್ಷಗಳ ಹಿಂದೆ ಬನ್ನೇರುಘಟ್ಟ ಶಿಬಿರ ಸೇರಿದ್ದರು. ಪುಟ್ಟಪ್ಪ ಅವರು ತಂದೆ, ತಾಯಿ, ಪತ್ನಿ ಮೂವರು ಮಕ್ಕಳು ಹಾಗೂ ಸಹೋದರರನ್ನು ಅಗಲಿ ಬಾರದ ಲೋಕಕ್ಕೆ ತೆರಳಿದ್ದಾರೆ.
ಇದನ್ನೂ ಓದಿ: ಆಹಾರ ಅರಸಿ ಸಿಆರ್ಪಿಎಫ್ ಕ್ಯಾಂಪ್ಗೆ ಬಂದ ಕಾಡಾನೆಗಳ ದಾಳಿಗೆ ಇಬ್ಬರು ಯೋಧರು ಹುತಾತ್ಮ
ಶಿರಬಡಗಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಪುಟ್ಟಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ತಾಲೂಕು ಆಡಳಿತವು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ.